ಚಾಮರಾಜನಗರ: ಸಿಡಿಲು ಬಡಿದು ರೈತ,ಕುರಿಗಾಹಿ ಹಾಗೂ ಆರು ಕುರಿಗಳು ಮೃತಪಟ್ಟಿರುವ ಘಟನೆ ಜಿಲ್ಲೆಯಲ್ಲಿ ಮಂಗಳವಾರ ಸಂಜೆ ಸಂಭವಿಸಿದೆ.
ಯಳಂದೂರು ತಾಲ್ಲೂಕು ಕೆಸ್ತೂರು ಗ್ರಾಮದ ರೈತ ರೇವಣ್ಣ (44) ಹಾಗೂ ಹನೂರು ತಾಲ್ಲೂಕು ಮೀಣ್ಯಂ ಗ್ರಾಮದ ಕುರಿಗಾಹಿ ಮಾದಪ್ಪ (64) ಮೃತಪಟ್ಟವರು.
ಭತ್ತ ನಾಟಿ ಸಿದ್ಧತೆಗಾಗಿ ಜಮೀನಿಗೆ ಹೋಗಿದ್ದ ರೇವಣ್ಣ ಸಂಜೆ 4 ರ ವೇಳೆಗೆ ಮನೆಗೆ ಹಿಂದಿರುಗುವಾಗ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಕುರಿಗಾಹಿ ಮಾದಪ್ಪ, ತೋಟದಲ್ಲಿ ಸಂಜೆ ಕುರಿ ಕಾಯುತ್ತಿದ್ದಾಗ ಸಿಡಿಲು ಬಡಿದಿದ್ದು ಮಾದಪ್ಪ ಅವರೊಂದಿಗೆ ಆರು ಕುರಿಗಳೂ ಸಾವಿಗೀಡಾಗಿವೆ.





