ಮಡಿಕೇರಿ: ಕೇರಳದಿಂದ ಕಸ ತಂದು ಇಲ್ಲಿಯ ಮಾಕುಟ್ಟ ಸಮೀಪದ ಅರಣ್ಯ ಪ್ರದೇಶದಲ್ಲಿ ಸುರಿಯುತ್ತಿದ್ದ ಇಬ್ಬರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಬಂಧಿತರನ್ನು ಪೆಂಚಾಳಯ್ಯ ಹಾಗೂ ಶೀನ ಎಂದು ಗುರುತಿಸಲಾಗಿದೆ. ಆರೋಪಿಗಳಿಬ್ಬರು ಆಂಧ್ರಪ್ರದೇಶದಿಂದ ಸರಕುಗಳನ್ನು ಕೇರಳಕ್ಕೆ ಸಾಗಿಸಿ ವಾಪಸ್ ಬರುತ್ತಿದ್ದ ಖಾಲಿ ವಾಹನದಲ್ಲಿ 15 ಮೂಟೆ ಕಸವನ್ನು ತೆಗೆದುಕೊಂಡು ಬಂದು ಇಲ್ಲಿನ ಕೂಟುಹೊಳೆ ಸೇತುವೆ ಸಮೀಪ ಎಸೆಯುತ್ತಿದ್ದರು. ಈ ವೇಳೆ ಬ್ರಹ್ಮಗಿರಿ ವನ್ಯಜೀವಿ ವಲಯ ಹಾಗೂ ಮಾಕುಟ್ಟ ಪ್ರಾದೇಶಿಕ ವಲಯದ ಅರಣ್ಯ ಅಧಿಕಾರಿಗಳ ತಂಡ ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದೆ.
ಬ್ರಹ್ಮಗಿರಿ ವನ್ಯಜೀವಿ ವಲಯದ ವಲಯ ಅರಣ್ಯ ಅಧಿಕಾರಿ ಡ್ಯಾನ್ಸಿ ದೇಚಮ್ಮ, ಉಪ ವಲಯ ಅರಣ್ಯ ಸಂರಕ್ಷಣಾ ಅಧಿಕಾರಿ ಲೋಕೇಶ್, ಸಿಬ್ಬಂದಿಯಾದ ಸ್ವಾಮಿ, ಸುಬ್ಬಯ್ಯ, ಮಾಕುಟ್ಟ ಪ್ರಾದೇಶಿಕ ವಲಯದ ವಲಯ ಅರಣ್ಯಾಧಿಕಾರಿ ಸುಹಾನಾ, ಉಪ ವಲಯ ಅರಣ್ಯ ಸಂರಕ್ಷಣಾ ಅಧಿಕಾರಿ ಚಂದ್ರಶೇಖರ, ಸಿಬ್ಬಂದಿ ಶಜಿ, ರೋಷನ್ ಹಾಜರಿದ್ದರು.