ಪೊನ್ನಂಪೇಟೆ: ಕೊಡಗಿನಲ್ಲಿ ಹುಲಿ ಉಪಟಳ ಮುಂದುವರಿದಿದ್ದು, ಹುಲಿ ದಾಳಿಗೆ ಎರಡು ಎಮ್ಮೆಗಳು ಬಲಿಯಾಗಿರುವ ಘಟನೆ ವಿರಾಜಪೇಟೆಯ ಹರಿಹರ ಗ್ರಾಮದಲ್ಲಿ ನಡೆದಿದೆ.
ಹರಿಹರ ಗ್ರಾಮದ ತೀತಿರ ಸದಾ ಬೋಪಯ್ಯ ಎಂಬವರಿಗೆ ಸೇರಿದ ಎಮ್ಮೆಗಳ ಮೇಲೆ ಹುಲಿ ದಾಳಿ ಮಾಡಿದ್ದು, ಎರಡು ಎಮ್ಮೆಗಳು ಸ್ಥಳದಲ್ಲೇ ಮೃತಪಟ್ಟಿವೆ.
ಕೆಲವು ದಿನಗಳ ಹಿಂದೆಯಷ್ಟೇ ಇದೇ ಭಾಗದಲ್ಲಿ ಹಸುವೊಂದು ಹುಲಿ ದಾಳಿಯಿಂದ ಸಾವನ್ನಪ್ಪಿತ್ತು. ಕಳೆದ ತಿಂಗಳಷ್ಟೇ ಸಿದ್ದಾಪುರ ವ್ಯಾಪ್ತಿಯಲ್ಲಿ ಜಾನುವಾರು ಭಕ್ಷಕ ಹುಲಿಯನ್ನು ಸೆರೆ ಹಿಡಿದು ಸ್ಥಳಾಂತರಿಸಲಾಗಿತ್ತು. ಆದರೆ, ಇದೀಗ ಮತ್ತೊಂದು ಹುಲಿ ಉಪಟಳ ನೀಡಲು ಆರಂಭಿಸಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ವಿರಾಜಪೇಟೆ ತಾಲ್ಲೂಕು ಬಿಜೆಪಿ ಕೃಷಿ ಮೋರ್ಚಾದ ಅಧ್ಯಕ್ಷ ಕಟ್ಟೆರ ಈಶ್ವರ ತಿಮ್ಮಯ್ಯ ಹುಲಿ ಸೆರೆಗೆ ಕ್ರಮ ಕೈಗೊಳ್ಳಬೇಕು ಮತ್ತು ಹೆಚ್ಚಿನ ಪರಿಹಾರವನ್ನು ಶೀಘ್ರ ಬಿಡುಗಡೆ ಮಾಡಬೇಕು ಎಂದು ಅರಣ್ಯ ಅಧಿಕಾರಿಗಳನ್ನು ಒತ್ತಾಯಿಸಿದರು.