ಮೈಸೂರು : ಸಮಾಜವಾದಿ ಚಿಂತಕ, ಪ್ರಗತಿಪರ ಸಾಮಾಜಿಕ ಹೋರಾಟಗಾರ ಪ ಮಲ್ಲೇಶ್ ರವರ ಅಂತಿಮ ದರ್ಶನವನ್ನು ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಇಂದು ಮೈಸೂರಿನ ಅವರ ನಿವಾಸಕ್ಕೆ ಭೇಟಿ ನೀಡಿ ಪಡೆದರು.
ಈ ವೇಳೆ ಪ ಮಲ್ಲೇಶ್ ರವರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ಚಿತ್ರದುರ್ಗ ಮೂಲದ ಪ. ಮಲ್ಲೇಶ್ ತಮ್ಮ ಓದಿಗಾಗಿ ಮೈಸೂರಿಗೆ ಬಂದವರು. ನಂತರ ಸಮಾಜವಾದಿ ಚಿಂತನೆಯಿಂದ ಪ್ರೇರಿತರಾಗಿ ಮೈಸೂರನ್ನೇ ಕೇಂದ್ರವಾಗಿಸಿಕೊಂಡು ಹೋರಾಟಕ್ಕೆ ಧುಮುಕಿದವರು. ಅವರಿಗೆ 81 ವರ್ಷ ವಯಸ್ಸಾಗಿತ್ತು. ಗುರುವಾರ ಮಧ್ಯಾಹ್ನ ತಮ್ಮ ಮನೆಯಲ್ಲಿ ಕುಸಿದು ಬಿದ್ದ ಅವರನ್ನು ಅಪೊಲೋ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೆ ನೆನ್ನೆ ದಿನ ಕೊನೆಯುಸಿರೆಳೆದರು. ಮಲ್ಲೇಶ್ ಅವರ ಪತ್ನಿ ಸರ್ವಮಂಗಳ 2021ರ ಮಾರ್ಚ್ ನಲ್ಲಿ ನಿಧನರಾಗಿದ್ದರು. ಅವರಿಗೆ ಒಬ್ಬ ಪುತ್ರ, ಮೂವರು ಪುತ್ರಿಯರಿದ್ದಾರೆ.
ಮೈಸೂರಿನಲ್ಲಿ ನಿನ್ನೆ ನಿಧನರಾದ ಹಿರಿಯ ಸಮಾಜವಾದಿ ಚಿಂತಕ, ಪ್ರಗತಿಪರ ಹೋರಾಟಗಾರ, ಆತ್ಮೀಯ ಸ್ನೇಹಿತ ಪ.ಮಲ್ಲೇಶ್ ಅವರ ನಿವಾಸಕ್ಕೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿ, ಕುಟುಂಬದವರಿಗೆ ಸಾಂತ್ವನ ಹೇಳಿದೆ. pic.twitter.com/hooGLbmFtu
— Siddaramaiah (@siddaramaiah) January 20, 2023
ಹೋರಾಟ, ಚಳವಳಿಯನ್ನೇ ಬದುಕಾಗಿಸಿಕೊಂಡಿದ್ದ ಗಾಂಧಿವಾದಿ, ಸಮಾಜಮುಖಿ ಚಿಂತನೆಯ ಪ್ರಖರ ವಾಗ್ಮಿ ಪ.ಮಲ್ಲೇಶ್ ಎಂದಿಗೂ ತಾವು ನಂಬಿದ ತತ್ವ ಸಿದ್ಧಾಂತಗಳೊಂದಿಗೆ ರಾಜಿಯಾಗಿರಲಿಲ್ಲ. ಆಚಾರ್ಯ ವಿನೋಬಾ ಬಾವೆ, ಜಯಪ್ರಕಾಶ್ ನಾರಾಯಣ್ (ಜೆಪಿ) ಅವರ ಚಳವಳಿಗಳಿಂದ ಪ್ರೇರಿತರಾಗಿ ಹೋರಾಟದ ಕಿಚ್ಚನ್ನು ಮೈಗೂಡಿಸಿಕೊಂಡು ಜೀವನದುದ್ದಕ್ಕೂ ತಮ್ಮ ಅಸ್ಮಿತೆಯನ್ನು ಉಳಿಸಿಕೊಂಡಿದ್ದರು.





