ಚಾಮರಾಜನಗರ ಜಿಲ್ಲೆಯಲ್ಲಿರುವ ಬಿಳಿರಂಗನಬೆಟ್ಟ ದಕ್ಷಿಣ ಕರ್ನಾಟಕದ ಜನಪ್ರಿಯ ಪುಣ್ಯಕ್ಷೇತ್ರಗಳಲ್ಲೊಂದು. ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕಿನಲ್ಲಿರುವ ಈ ಪುಣ್ಯಕ್ಷೇತ್ರ ದಟ್ಟ ಅರಣ್ಯದ ನಡುವೆ ಇದ್ದು, ಅದನ್ನು ಹುಲಿ ಸಂರಕ್ಷಣಾ ವಲಯ ಎಂದೂ ಸಹ ಘೋಷಿಸಲಾಗಿದೆ.
ಬಿಳಿರಂಗನಬೆಟ್ಟದಲ್ಲಿ ಹುಲಿ ಮಾತ್ರವಲ್ಲದೇ ಆನೆ, ಜಿಂಕೆ ಮುಂತಾದ ವನ್ಯಜೀವಿಗಳ ಹಿಂಡೇ ಇದ್ದು, ದೇವಸ್ಥಾನಕ್ಕೆ ತೆರಳುವ ಹಾದಿಯಲ್ಲಿ ಈ ಪ್ರಾಣಿಗಳು ಕಣ್ಣಿಗೆ ಬೀಳಲಿದ್ದು, ಪುಣ್ಯಕ್ಷೇತ್ರದ ಜತೆ ಒಂದೊಳ್ಳೆ ಫಾರೆಸ್ಟ್ ಜೋನ್ ಸಹ ಇದಾಗಿದೆ. ಇನ್ನು ಈ ಪ್ರದೇಶದಲ್ಲಿ ಕಾಡುಪ್ರಾಣಿಗಳ ಬೇಟೆಯನ್ನು ತಪ್ಪಿಸಲು ಇದೀಗ ಅರಣ್ಯ ಅಧಿಕಾರಿಗಳು ಹೊಸ ಯೋಜನೆಯನ್ನು ಹೆಣೆದಿದ್ದಾರೆ.
ಹೌದು, ಬಿಳಿರಂಗನಬೆಟ್ಟ ಪ್ರವೇಶಿಸುವಾಗ ಆರಂಭದಲ್ಲಿ ಸಿಗುವ ಚೆಕ್ಪೋಸ್ಟ್ನಲ್ಲಿ ಇನ್ನುಮುಂದೆ ಪ್ರತಿ ವಾಹನಕ್ಕೂ ಪ್ರತ್ಯೇಕ ಪಾಸ್ ಅನ್ನು ನೀಡಲಾಗಲಿದ್ದು, ಅದೇ ಪಾಸನ್ನು ದೇವಸ್ಥಾನದ ಬಳಿ ಸಿಗುವ ಎರಡನೇ ಚೆಕ್ ಪೋಸ್ಟ್ನಲ್ಲಿ ಸಹ ಪ್ರಯಾಣಿಕರು ಎಂಟ್ರಿ ಮಾಡಿಸಬೇಕಿದೆ. ಇದರಿಂದ ಎಷ್ಟು ಜನ ಒಳಗೆ ಹೋಗಿದ್ದಾರೆ ಹಾಗೂ ಎಷ್ಟು ಜನ ಹೊರಬಂದಿದ್ದಾರೆ ಎಂಬ ಸ್ಪಷ್ಟತೆ ಅರಣ್ಯ ಇಲಾಖೆ ಸಿಬ್ಬಂದಿಗೆ ಲಭಿಸಲಿದ್ದು, ಮೃಗಬೇಟೆಗಾರನ್ನು ತಡೆಯಲು ಈ ಪ್ಲಾನ್ ಮಾಡಲಾಗಿದೆ.