Mysore
28
overcast clouds

Social Media

ಶನಿವಾರ, 22 ಆಗಸ್ಟ್ 2026
Light
Dark

ಭತ್ತ ಖರೀದಿಯಲ್ಲಿ ಗೊಂದಲ; ರೈತರು ಕಂಗಾಲು

ಜಿಲ್ಲೆಯ ೧ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆ; ಸಾಲ ಮಾಡಿ ಭತ್ತ ಬೆಳೆದಿರುವ ರೈತರಲ್ಲಿ ಕಳವಳ

ಗಿರೀಶ್ ಹುಣಸೂರು/ ಆನಂದ್ ಹೊಸೂರು
ಮೈಸೂರು/ ಹೊಸೂರು: ಮುಂಗಾರು ಹಂಗಾಮಿನ ಭತ್ತ ಕೊಯ್ಲು ಆರಂಭವಾಗಿದ್ದರೂ ಸರ್ಕಾರ ಈವರೆಗೆ ಬೆಂಬಲ ಬೆಲೆ ಯೋಜನೆಯಡಿ ಖರೀದಿಗೆ ಮುಂದಾಗದಿರುವುದು ರೈತರಲ್ಲಿ ಗೊಂದಲಕ್ಕೆ ಕಾರಣವಾಗಿದೆ.
ಕಾವೇರಿ ಹಾಗೂ ಕಪಿಲಾ ನದಿ ಪಾತ್ರದ ತಾಲ್ಲೂಕುಗಳು ಸೇರಿದಂತೆ ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ೬೫೦೦ ಹೆಕ್ಟೇರ್, ಹುಣಸೂರು ತಾಲ್ಲೂಕಿನಲ್ಲಿ ೧೦೯೨೦ ಹೆಕ್ಟೇರ್, ಕೆ.ಆರ್.ನಗರ ತಾಲ್ಲೂಕಿನಲ್ಲಿ ೨೬೫೦೦ ಹೆಕ್ಟೇರ್, ಮೈಸೂರು ತಾಲ್ಲೂಕಿನಲ್ಲಿ ೮೨೮೦ ಹೆಕ್ಟೇರ್, ನಂಜನಗೂಡು ತಾಲ್ಲೂಕಿನಲ್ಲಿ ೧೮೫೦೦ ಹೆಕ್ಟೇರ್, ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ೮೪೦೦ ಹೆಕ್ಟೇರ್, ತಿ.ನರಸೀಪುರ ತಾಲ್ಲೂಕಿನಲ್ಲಿ ೨೭೧೨೨ ಹೆಕ್ಟೇರ್ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು ೧೦೬೨೨೨ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಕಳೆದ ವರ್ಷ ೧೦೧೬೩೬ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿತ್ತು ಎಂದು ಜಂಟಿ ಕೃಷಿ ನಿರ್ದೇಶಕ ಡಾ.ಬಿ.ಎಸ್.ಚಂದ್ರಶೇಖರ್ ಮಾಹಿತಿ ನೀಡಿದ್ದಾರೆ. ಜಿಲ್ಲೆಯಲ್ಲಿ ಈಗಾಗಲೇ ಭತ್ತದ ಕೊಯ್ಲು ಆರಂಭವಾಗಿದೆ. ಆದರೆ, ಸರ್ಕಾರ ಖರೀದಿ ಕೇಂದ್ರ ತೆರೆಯಲು ವಿಳಂಬ ಮಾಡುತ್ತಿರುವುದರಿಂದ ಕಷ್ಟಪಟ್ಟು ಸಾಲ ಮಾಡಿ ಭತ್ತ ಬೆಳೆದಿರುವ ರೈತ ದಿಕ್ಕು ಕಾಣದೆ ಕಂಗಾಲಾಗುವಂತಾಗಿದೆ.
ಕೇಂದ್ರ ಸರ್ಕಾರ ಭತ್ತಕ್ಕೆ ಗ್ರೇಡ್ ಆಧಾರದ ಮೇಲೆ ಪ್ರತಿ ಕ್ವಿಂಟಾಲ್‌ಗೆ ೨೦೪೦ ಹಾಗೂ ೨೦೬೦ ರೂ. ಎಂಎಫ್‌ಸಿ ನಿಗದಿಪಡಿಸಿದೆ. ಇದಕ್ಕೆ ಜೊತೆಯಾಗಿ ರಾಜ್ಯ ಸರ್ಕಾರ ಕುಚುಲಕ್ಕಿ ಬೆಳೆಯುವ ಪ್ರದೇಶಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭತ್ತ ಖರೀದಿಗೆ ಪ್ರತಿ ಕ್ವಿಂಟಾಲ್‌ಗೆ ೫೦೦ ರೂ. ಪ್ರೋತ್ಸಾಹ ಧನ ಘೋಷಿಸಿದ್ದು, ಇನ್ನಷ್ಟೇ ಖರೀದಿ ಕೇಂದ್ರಗಳು ಆರಂಭವಾಗಬೇಕಿದೆ. ಕೇಂದ್ರದ ಬೆಂಬಲ ಬೆಲೆ ಜತೆಗೆ ರಾಜ್ಯ ಸರ್ಕಾರ ಬೆಂಬಲ ಬೆಲೆಯನ್ನೂ ಇಡೀ ರಾಜ್ಯಕ್ಕೆ ಘೋಷಣೆ ಮಾಡಿ ಆದಷ್ಟು ಬೇಗ ಖರೀದಿ ಮಾಡಬೇಕೆಂಬುದು ರೈತರ ಒತ್ತಾಯವಾಗಿದೆ.
ಕೆಎಸ್‌ಎಫ್‌ಸಿ ಮೂಲಕ ಖರೀದಿ: ಈವರೆಗೆ ಬೆಂಬಲ ಬೆಲೆ ಯೋಜನೆಯಡಿ ಅಕ್ಕಿ ಗಿರಣಿಗಳ ಮೂಲಕ ರೈತರಿಂದ ಭತ್ತ ಖರೀದಿ ಮಾಡಲಾಗುತ್ತಿತ್ತು. ಆದರೆ, ಈ ವರ್ಷ ಸರ್ಕಾರ ಕರ್ನಾಟಕ ರಾಜ್ಯ ಆಹಾರ ನಿಗಮ(ಕೆಎಸ್‌ಎಫ್‌ಸಿ) ಮೂಲಕ ಭತ್ತ ಖರೀದಿಗೆ ಮುಂದಾಗಿರುವುದು ರೈತರಲ್ಲಿ ಗೊಂದಲ ಮೂಡಿಸಿದೆ. ಅಕ್ಕಿ ಗಿರಣಿಗಳ ಮೂಲಕ ಭತ್ತ ಖರೀದಿಸಿದರೆ, ಸ್ಥಳೀಯವಾಗಿ ನಮ್ಮ ಸಮೀಪದ ಅಕ್ಕಿ ಗಿರಣಿಗಳಿಗೆ ಭತ್ತ ಸಾಗಿಸಿ ಮಾರಾಟ ಮಾಡಿ ಹಣ ಪಡೆಯಬಹುದು. ಇದರಿಂದ ಸಾಗಣೆ ವೆಚ್ಚ ಹಾಗೂ ಕಾಯುವಿಕೆ ತಪ್ಪುತ್ತದೆ ಎಂಬುದು ರೈತ ಮುಖಂಡರ ವಾದ.
ಈಗಾಗಲೇ ಗದ್ದೆ ಬಯಲಿಗೆ ಎಡ ತಾಕುತ್ತಿರುವ ದಲ್ಲಾಳಿಗಳು ರೈತರನ್ನು ಪುಸಲಾಯಿಸಿ ೧,೫೦೦ರಿಂದ ೧,೮೦೦ ರೂ.ವರೆಗೆ ಹಣ ನೀಡಿ ಭತ್ತ ಖರೀದಿಗೆ ಮುಂದಾಗಿದ್ದು, ಆದಷ್ಟು ಬೇಗ ಸರ್ಕಾರ ಖರೀದಿ ಕೇಂದ್ರಗಳನ್ನು ತೆರೆಯದಿದ್ದರೆ, ರೈತರು ಬೆಳೆದಿರುವ ಬಹುಪಾಲು ಭತ್ತ ದಲ್ಲಾಳಿಗಳ ಪಾಲಾಗುತ್ತದೆ. ಇದನ್ನು ತಪ್ಪಿಸಲು ಸರ್ಕಾರ ಕೂಡಲೇ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಕೇಂದ್ರಗಳನ್ನು ತೆರೆಯಲು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.

ಸರ್ಕಾರದ ಖರೀದಿ ಕೇಂದ್ರಗಳಲ್ಲಿ ಅಕ್ರಮ ಜಾಸ್ತಿಾಂದ ಕಾರಣವೇ ರೈಸ್‌ಮಿಲ್ ವಾಲೀಕರಿಗೆ ಖರೀದಿ ವಾಡಲು ಆದೇಶ ವಾಡಿದ್ದು ಆದರೆ ಮತ್ತೆ ಅಧಿಕಾರಿಗಳಿಗೆ ವಹಿಸಿದರೆ ರೈತರನ್ನು ಶೋಷಿಸುವುದು ವಾತ್ರವಲ್ಲ ನಮಗೆ ಸಾಗಾಟವೆಚ್ಚ,ದಾಸ್ತಾನು ವಾಡಲು ಸಾಧ್ಯವಾಗುವುದಿಲ್ಲ ಆದ್ದರಿಂದ ಸರ್ಕಾರ ತನ್ನ ಆದೇಶ ಬದಲಿಸಬೇಕು.

-ಸುದರ್ಶನ್
ರೈತ.ಹೊಸೂರು ಗ್ರಾಮ


ಸರ್ಕಾರ ಆದಷ್ಟು ಬೇಗ ಭತ್ತ ಖರೀದಿ ಕೇಂದ್ರ ಆರಂಭಿಸಿದರೆ ಕಷ್ಟಪಟ್ಟು ಬೆಳೆದ ರೈತರಿಗೆ ಅನುಕೂಲ. ತಡವಾದರೆ, ಮಧ್ಯವರ್ತಿಗಳು ರೈತರಿಂದ ಕಡಿಮೆ ಬೆಲೆಗೆ ಭತ್ತ ಖರೀದಿಸಿ ಲಾಭ ಮಾಡಿಕೊಳ್ಳುತ್ತಾರೆ. ಸರ್ಕಾರ ಇದಕ್ಕೆ ಅವಕಾಶ ಕೊಡಬಾರದು.
ಉಮೇಶಪ್ಪ, ವ್ಯವಸ್ಥಾಪಕರು, ಕರ್ನಾಟಕ ರಾಜ್ಯ ಅಕ್ಕಿ ಗಿರಣಿದಾರರ ಸಂಘ.


ಸರ್ಕಾರ ಹಿಂದಿನಂತೆಯೇ ರೈಸ್ ಮಿಲ್‌ಗಳ ಮೂಲಕ ಭತ್ತ ಖರೀದಿ ಮಾಡಿದರೆ ರೈತರಿಗೆ ಅನುಕೂಲ. ಕೆಎಸ್‌ಎಫ್‌ಸಿ ಮೂಲಕ ಖರೀದಿಗೆ ಮುಂದಾದರೆ ಖರೀದಿ ತಡವಾಗಿ ರೈತರಿಗೆ ನಷ್ಟ ಉಂಟಾಗುತ್ತದೆ. ಕೇರಳದಂತೆ ಕರ್ನಾಟಕ ಸರ್ಕಾರವೂ ಪ್ರತಿ ಕ್ವಿಂಟಾಲ್ ಭತ್ತಕ್ಕೆ ೫೦೦ ರೂ. ಪ್ರೋತ್ಸಾಹಧನ ನೀಡಬೇಕು.
ಹೊಸಕೋಟೆ ಬಸವರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ರೈತ ಸಂಘ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!