Mysore
21
overcast clouds

Social Media

ಶನಿವಾರ, 13 ಜೂನ್ 2026
Light
Dark

ಅಕ್ರಮ ರೆಸಾರ್ಟ್, ಹೋಂ ಸ್ಟೇ : ಕ್ರಮಕ್ಕೆ ಆಗ್ರಹ

ಬಿಳಿಗಿರಿರಂಗನಬೆಟ್ಟ ಹುಲಿ ಯೋಜನೆ ವ್ಯಾಪ್ತಿ: ವರದಿ ಜಾರಿಗೆ ಪರಿಸರವಾದಿಗಳ ಆಗ್ರಹ

ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತಾರಣ್ಯದಲ್ಲಿ ಇರುವ ಅನಧಿಕೃತ ರೆಸಾರ್ಟ್‌ಗಳು ಮತ್ತು ಹೋಂಸ್ಟೇಗಳ ತೆರವಿಗೆ ಕ್ರಮ ವಹಿಸಬೇಕೆಂಬ ಆಗ್ರಹ ಕೇಳಿಬಂದಿದೆ.
ವನ್ಯಜೀವಿಗಳ ರಕ್ಷಣೆಯ ಹಿತದೃಷ್ಟಿಯಿಂದ ಸಂರಕ್ಷಿತಾರಣ್ಯಗಳಲ್ಲಿ ಇರುವ ಅಕ್ರಮ ರೆಸಾರ್ಟ್ ಮತ್ತು ಹೋಂಸ್ಟೇಗಳನ್ನು ಎತ್ತಂಗಡಿ ಮಾಡಿಸಬೇಕು. ಅಲ್ಲದೆ, ಅವುಗಳ ವಿಸ್ತರಣೆಗೆ ಅವಕಾಶ ನೀಡಬಾರದು ಎಂದು ವನ್ಯಜೀವಿ ಪ್ರೇಮಿಗಳು ಆಗ್ರಹಿಸಿದ್ದಾರೆ.
ಹೊಸದಾಗಿ ತೆರೆಯಲು ಅವಕಾಶ ನೀಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಸೂಚಿಸಿದೆ. ಹಾಗಾಗಿ ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದೊಳಗೆ ಹಾಗೂ ಅಂಚಿನಲ್ಲಿರುವ ಅಕ್ರಮ ರೆಸಾರ್ಟ್, ಹೋಂಸ್ಟೇಗಳ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಕೋರಿ ಪರಿಸರವಾದಿ ಗಿರಿಧರ ಕುಲಕರ್ಣಿ ಅವರು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಕೇಂದ್ರ ಕಚೇರಿಗೆ ದೂರು ನೀಡಿದ್ದರು. ದೂರಿನ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಪ್ರಾಧಿಕಾರದ ಕೇಂದ್ರ ಕಚೇರಿಯು ಬೆಂಗಳೂರಿನಲ್ಲಿರುವ ಪ್ರಾಧಿಕಾರದ ಪ್ರಾದೇಶಿಕ ಕಚೇರಿಗೆ ಸೂಚಿಸಿತ್ತು. ಬೆಟ್ಟದಲ್ಲಿರುವ ಗೊರುಕನ ರೆಸಾರ್ಟ್ಸ್, ಗಿರಿದರ್ಶಿನಿ ರೆಸಿಡೆನ್ಸಿ, ಚಂಪಕಾರಣ್ಯ ಹೋಂ ಸ್ಟೇ, ಶ್ವೇತಾದ್ರಿ ಹೋಂ ಸ್ಟೇ, ರಜತಾದ್ರಿ ಹಿಲ್ ವಿಲಾಸ್, ರಾಜಕುಮಾರ್ ಲಾಡ್ಜ್, ಆಕಾಶ್ ಲಾಡ್ಜ್, ರಂಗಣ್ಣ ರೂಮ್ಸ್, ಪಿ.ಸಿ.ಮಂಜು ವಸತಿ ಗೃಹಗಳಲ್ಲಿ ಪರಿಶೀಲಿಸಿ ಪ್ರಾಧಿಕಾರದ ಕೇಂದ್ರ ಕಚೇರಿಗೆ ವರದಿಯನ್ನು ನ.28ರಂದು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಕ್ರಮ ವಹಿಸುವಂತೆ ಪ್ರಾಧಿಕಾರವು ಶಿಫಾರಸು ಮಾಡಿದೆ.


ಕ್ರಮ ಜಾರಿಯಾಗಲಿ
ಸಂರಕ್ಷಿತಾರಣ್ಯದಲ್ಲಿ ಅಕ್ರಮ ರೆಸಾರ್ಟ್ ಮತ್ತು ಹೋಂಸ್ಟೇಗಳು ನಿರ್ಮಾಣವಾಗಿವೆ ಎಂಬ ಮಾಹಿತಿಯಿದೆ. ಅವುಗಳ ವಿರುದ್ಧ ಸಂಬಂಧಿಸಿದವರು ಕ್ರಮ ವಹಿಸಲಿ. ಜತೆಗೆ ಮಲೆಮಹದೇಶ್ವರ ಬೆಟ್ಟದಲ್ಲಿ ಜನರು, ಪ್ರವಾಸಿಗರ ಅನುಕೂಲಕ್ಕೆ ಮೂಲ ಸೌಲಭ್ಯಗಳನ್ನು ಕಲ್ಪಿಸಿರುವಂತೆ ಇಲ್ಲಿಯೂ ಸೌಲಭ್ಯಗಳನ್ನು ನೀಡಲಿ.
ಡಾ.ಸಿ.ಮಾದೇಗೌಡ, ಕಾರ್ಯದರ್ಶಿ, ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘ


ಅಕ್ರಮಕ್ಕೆ ಅನುಮತಿ ಏಕೆ?

ಹೊಸದಾಗಿ ರೆಸಾರ್ಟ್ ತೆರೆುಂಲು ಅವಕಾಶ ನೀಡಬಾರದು ಎಂಬ ಆದೇಶವಿದೆ. ಅಲ್ಲದೆ ಅನಧಿಕೃತ ರೆಸಾರ್ಟ್ ಮತ್ತು ಹೋಂಸ್ಟೇಗಳನ್ನು ತೆರವು ಮಾಡಲು ಕಾನೂನಿನಲ್ಲಿ ಅವಕಾಶವಿದೆ. ಆದರೂ ಇವುಗಳು ಅಕ್ರಮವಾಗಿ ನಡೆಯುತ್ತಿವುದಾದರೂ ಹೇಗೆ? ಈ ಸಂಬಂಧ ಕಾನೂನು ಪಾಲನೆಯಾಗಲಿ.

ರಘುರಾಂ, ಪರಿಸರವಾದಿ. ಹಿಮಗಿರಿ ವನ್ಯಜೀವಿ ಸಂಸ್ಥೆ, ಗುಂಡ್ಲುಪೇಟೆ


ಬಿಆರ್‌ಟಿಗೆ ಸೀಮಿತ ಬೇಡ

ಸರ್ಕಾರದ ನಿಯಮಾವಳಿ ಮೀರಿ ರೆಸಾರ್ಟ್ ಮತ್ತು ಹೋಂಸ್ಟೇ ನಡೆಸುತ್ತಿದ್ದರೆ ಕಾನೂನು ಕ್ರಮ ವಹಿಸಬೇಕು. ಇದು ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯಕ್ಕೆ ಮಾತ್ರ ಸೀಮಿತವಾಗಬಾರದು. ರಾಜ್ಯದ ಎಲ್ಲ ಸಂರಕ್ಷಿತಾರಣ್ಯಗಳ ವ್ಯಾಪ್ತಿಯಲ್ಲಿರುವ ರೆಸಾರ್ಟ್‌ಗಳ ಬಗ್ಗೆ ಪರಿಶೀಲನೆ ನಡೆಸಿ ಅಕ್ರಮವಾಗಿದ್ದರೆ ಕ್ರಮ ವಹಿಸಲಿ.
-ಮಲ್ಲೇಶಪ್ಪ, ಸದಸ್ಯರು, ರಾಜ್ಯ ವನ್ಯಜೀವಿ ಮಂಡಳಿ


ಹಳೆ ರೆಸಾರ್ಟ್‌ಗಳ ಮೇಲೇಕೆ ಕ್ರಮ?
ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತಾರಣ್ಯವಾಗಿ ಘೋಷಣೆಯಾಗುವ ಮೊದಲೇ ಕೆಲವು ರೆಸಾರ್ಟ್‌ಗಳು ಆರಂಭವಾಗಿವೆ. ಅವುಗಳು ಸ್ಥಳೀಯ ಗ್ರಾಪಂ, ಪ್ರವಾಸೋದ್ಯಮ ಮತ್ತು ಅರಣ್ಯ ಇಲಾಖೆಗಳ ಅನುಮತಿ ಪಡೆದು ಕಂದಾಯ ಜಾಗದಲ್ಲಿ ನಡೆಯುತ್ತಿವೆ. ಸ್ಥಳೀಯರು ತಮ್ಮ ಜೀವನ ನಿರ್ವಹಣೆಗಾಗಿ ಸಣ್ಣ ಪುಟ್ಟ ಮನೆಗಳಲ್ಲಿರುವ ಕೊಠಡಿಗಳನ್ನು ಯಾತ್ರಿಗಳು ಉಳಿದುಕೊಳ್ಳಲು ಬಾಡಿಗೆಗೆ ನೀಡುತ್ತಾರೆ. ಅಧಿಕಾರಿಗಳು ಸರಿಯಾಗಿ ದಾಖಲೆಗಳನ್ನು ಪರಿಶೀಲಿಸಬೇಕು. ವಿನಾಕಾರಣ ಆರೋಪ ಮಾಡುವುದು ಸರಿಯಲ್ಲ.
ವಾಸು, ಮಾಲೀಕರು, ಗಿರಿದರ್ಶಿನಿ, ಬಿಆರ್‌ಟಿ


ಮಾಹಿತಿಗಾಗಿ ಕಾಯುತ್ತಿದ್ದೇವೆ

ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತಾರಣ್ಯ ವ್ಯಾಪ್ತಿಯಲ್ಲಿರುವ ಅಕ್ರಮ ರೆಸಾರ್ಟ್‌ಗಳು ಮತ್ತು ಹೋಂಸ್ಟೇಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ಶಿಫಾರಸು ಮಾಡಿರುವ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ನಮಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಪರಿಸರವಾದಿ ಗಿರಿಧರ್ ಕುಲಕರ್ಣಿ ಅವರು ಆರ್‌ಟಿಐಯಿಂದ ಮಾಹಿತಿ ಪಡೆದು ಬಿಡುಗಡೆ  ಮಾಡಿದ್ದಾರೆ.

– ದೀಪ್ ಕಂಟ್ರ್ಯಾಕ್ಟರ್, ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದ ನಿರ್ದೇಶಕರು.


ಕಾನೂನುಗಳು ಸಮಾನವಾಗಿರಲಿ
ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತಾರಣ್ಯದ ಅಂಚಿನಲ್ಲಿ ಹಾಗೂ ಒಳಗಡೆ ಇರುವ ಜನರು ಮತ್ತು ಗಿರಿಜನರು ಮನೆ ಕಟ್ಟಿಕೊಳ್ಳಲು, ಇತರೆ ಸೌಲಭ್ಯ ಪಡೆಯಲು ಮುಂದಾದರೆ ಅರಣ್ಯಾಧಿಕಾರಿಗಳು ತೊಂದರೆ ನೀಡುತ್ತಾರೆ. ಅರಣ್ಯ ಸಂರಕ್ಷಣೆ ಕಾನೂನಿದೆ ಎಂದು ಹೇಳುತ್ತಾರೆ. ಅಲ್ಲಿಯೇ ರೆಸಾರ್ಟ್‌ಗಳು ಮತ್ತು ಹೋಂಸ್ಟೇಗಳು ಅಕ್ರಮವಾಗಿ ನಡೆಯುತ್ತಿದ್ದರೆ ಅರಣ್ಯ ಇಲಾಖೆಯವರು ಖಚಿತಪಡಿಸಿಕೊಂಡು ತೆರವುಗೊಳಿಸಲು ಕ್ರಮ ವಹಿಸಬೇಕು. ಎಲ್ಲರಿಗೂ ಒಂದೇ ಕಾನೂನು ಅನ್ವಯವಾಗಬೇಕು.

-ಎನ್.ಮಹೇಶ್, ಶಾಸಕರು, ಕೊಳ್ಳೇಗಾಲ ಕ್ಷೇತ್ರ

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!