ಅಂತರಸಂತೆ : ಎಚ್.ಡಿ.ಕೋಟೆ ತಾಲ್ಲೂಕಿನ ಯುವ ಕ್ರೀಡಾಪಟು ಮಹೇಂದ್ರ ಎಂಬ ವಿದ್ಯಾರ್ಥಿ ಇತ್ತೀಚಿಗೆ ನಡೆದ ಶಾಲಾ ವಿಭಾಗದ ಜಿಲ್ಲಾಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದ ೮೦೦ ಮೀ. ಓಟದ ಸ್ಪರ್ಧೆಯಲ್ಲಿ ಬಹುಮಾನ ಗೆಲ್ಲುವ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ತಾಲ್ಲೂಕಿನ ಬೀಚನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಹೇಂದ್ರ ಸಮೀಪದ ಬಿದರಹಳ್ಳಿ ಗ್ರಾಮದವರು. ಇವರಲ್ಲಿನ ಕ್ರೀಡೆಯಲ್ಲಿನ ಆಸಕ್ತಿಯನ್ನು ಗುರುತಿಸಿ ದೈಹಿಕ ಶಿಕ್ಷಕ ರಮೇಶ್ರವರು ಹಾಗೂ ಶಾಲೆಯ ಮುಖ್ಯ ಶಿಕ್ಷಕ ನಾಗಣ್ಣ ಪ್ರೋತ್ಸಾಹಿಸಿದ ಪರಿಣಾಮ ಜಿಲ್ಲಾಮಟ್ಟದ 800 ಮೀ. ಓಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಗೆಲ್ಲುವ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಇದೇ ಶಾಲೆಯಿಂದ ಐವರು ವಿದ್ಯಾರ್ಥಿನಿಯರು ಬಾಲ್ ಬ್ಯಾಡ್ಮಿಂಟನ್ ಆಟದಲ್ಲಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದರು.