ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಅಂಗವಾಗಿ ಇಂದು ಚಾಮುಂಡೇಶ್ವರಿ ಬೆಟ್ಟದಲ್ಲಿ ನಡೆದ ನಾಡಹಬ್ಬ ದಸರಾ ಮಹೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಬೇಕಿದ್ದ ಶಾಸಕ ಜಿ.ಟಿ.ದೇವೇಗೌಡ ಅವರೇ ವೇದಿಕೆ ಕೆಳಗಡೆ ಕುಳಿತು ಕಾರ್ಯಕ್ರಮ ವೀಕ್ಷಿಸುವಂತಹ ಪ್ರಸಂಗ ನಿರ್ಮಾಣವಾಯಿತು.
ರಾಜ್ಯ ಸರ್ಕಾರ ಮುದ್ರಿಸಿದ್ದ ದಸರಾ ಅಧಿಕೃತ ಆಹ್ವಾನ ಪತ್ರಿಕೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಅವರು ಅಧ್ಯಕ್ಷತೆ ವಹಿ ಸಲಿದ್ದಾರೆ ಎಂದು ಹೇಳಲಾಗಿತ್ತು. ಅದೇ ರೀತಿ ಶಾಸಕ ಜಿ.ಟಿ.ದೇವೇಗೌಡ ಅವರು ೯.೩೦ಕ್ಕೆ ಆಗಮಿಸಿ ವೇದಿಕೆಯನ್ನೇರಿದರಲ್ಲದೆ ಉತ್ಸವ ಮೂರ್ತಿಗೆ ಕೈಮುಗಿಯುವ ಜತೆಗೆ ಸಭಿಕರತ್ತ ಕೈ ಬೀಸಿ ವಾಪಸ್ ದೇವಸ್ಥಾನಕ್ಕೆ ತೆರಳಿದ್ದರು. ರಾಷ್ಟ್ರಪತಿಗಳ ಜತೆಗೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಹೊರ ಬರುತ್ತಿದ್ದಂತೆ ವೇದಿಕೆಯಲ್ಲಿ ಅವಕಾಶವಿಲ್ಲವೆಂದು ಮಾಹಿತಿ ತಲುಪಿತು. ಇದರಿಂದಾಗಿ ಬೇಸರದಿಂದಲೇ ಶಾಸಕರ ಗ್ಯಾಲರಿಯತ್ತ ಆಗಮಿಸಿ ಕುಳಿತರು.
ಶಾಸಕರಿಗೂ ಅವಕಾಶವಿಲ್ಲವೆಂದ ಕಾರಣ ಇಲ್ಲಿಗೆ ಬಂದು ಕುಳಿತಿದ್ದೇನೆ ಎಂದು ಜಿ.ಟಿ.ದೇವೇಗೌಡ ಅವರು ಹೇಳಿದರು. ಸಮಾರಂಭದ ಅಧ್ಯಕ್ಷತೆ ವಹಿಸಬೇಕಿದ್ದ ಜಿ.ಟಿ.ದೇವೇಗೌಡ ಅವರೇ ವೇದಿಕೆಯಲ್ಲಿ ಇಲ್ಲದ ಕಾರಣ ಯಾರೂ ಅಧ್ಯಕ್ಷತೆ ವಹಿಸಲಿಲ್ಲ. ಪ್ರಾಸ್ತಾವಿಕವಾಗಿ ಮಾತನ್ನಾಡಬೇಕಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸ್ವಾಗತ ಭಾಷಣಕ್ಕೆ ಸೀಮಿತವಾದರು.
ಕೇವಲ ಆಹ್ವಾನ ಪತ್ರಿಕೆಯಲ್ಲಷ್ಟೇ ಅಧ್ಯಕ್ಷತೆ ವಹಿಸುವಂತಾದ ಜಿಟಿಡಿ





