ಮೈಸೂರು: ಹಾಸನಾಂಬೆ ದೇವಾಲಯ ಭೇಟಿ ವಿಚಾರದಲ್ಲಿ ಗೊಂದಲ ಉಂಟಾಗಿ ದೇವತಾಮೂರ್ತಿ ದರ್ಶನ ದೊರೆಯದೆ ತೀವ್ರ ಅಸಮಾಧಾನಗೊಂಡಿದ್ದ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಅವರು ಹಾಸನ ಶಾಸಕ ಪ್ರೀತಂಗೌಡ ಸಮ್ಮುಖದಲ್ಲೇ ದೇವತಾಮೂರ್ತಿ ದರ್ಶನ ಪಡೆದರು.
ದರ್ಶನ ಪಡೆದು ಹೊರ ಬಂದ ನಂತರ ಮಾತನಾಡಿದ ಎಲ್.ನಾಗೇಂದ್ರ, ನನ್ನ ಆತ್ಮೀಯ ಸ್ನೇಹಿತ, ಶಾಸಕ ಪ್ರೀತಂಗೌಡ ಅವರು ನನಗೆ ದೇವಿಯ ದರ್ಶನ ಮಾಡಿಸಿದ್ದಾರೆ. ಭಾನುವಾರ ಸಮನ್ವಯತೆ ಕೊರತೆಯಿಂದ ಗೊಂದಲ ಉಂಟಾಗಿತ್ತು. ಹಾಗಾಗಿ ದೇವರ ದರ್ಶನಕ್ಕೆ ಬಂದಾಗ ನಿರಾಶೆಯಾಗಿತ್ತಾದರೂ ಇಂದು ಸಂತೋಷವಾಗಿದೆ ಎಂದು ಹೇಳಿದರು.
ಶಾಸಕ ಪ್ರೀತಂಗೌಡ ಮಾತನಾಡಿ, ಭಾನುವಾರ ಸಮನ್ವಯದ ಕೊರತೆಯಿಂದ ಸಮಸ್ಯೆ ಆಗಿತ್ತು. ನನ್ನ ಸಹೋದರ ಸಮಾನರಾದ ಶಾಸಕ ಎಲ್.ನಾಗೇಂದ್ರ ಅವರಲ್ಲಿ ಕ್ಷಮೆ ಕೋರುತ್ತೇನೆ. ಕೆಲಸದ ಒತ್ತಡದಿಂದ ಅಧಿಕಾರಿಗಳು ತಡೆಹಿಡಿದಿದ್ದರು. ಯಾವುದೇ ಪಕ್ಷದ ಚುನಾಯಿತ ಪ್ರತಿನಿಧಿ ಬಂದರೂ ಎಲ್ಲ ರೀತಿಯ ಸಹಕಾರವನ್ನು ಜಿಲ್ಲಾಡಳಿತ ನೀಡಿದೆ. ನನಗೆ ಯಾವುದೇ ಸ್ವಪ್ರತಿಷ್ಠೆ ಇಲ್ಲ. ಯಾರೂ ತಪ್ಪು ಮಾಡಬೇಕೆಂದು ಮಾಡಲ್ಲ. ಆಕಸ್ಮಿಕವಾಗಿ ಈ ಘಟನೆಯಾಗಿದೆ. ಇದನ್ನು ಇಲ್ಲಿಗೆ ಮುಕ್ತಾಯ ಮಾಡೋಣ ಎಂದರು.
ಎಲ್.ನಾಗೇಂದ್ರ ಅವರೊಂದಿಗೆ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಎಂ.ಜೆ.ಕಿರಣ್ ಗೌಡ, ದಿನೇಶ್ ಗೌಡ ಮೊದಲಾದವರು ದರ್ಶನ ಪಡೆದರು.