Mysore
22
overcast clouds

Social Media

ಭಾನುವಾರ, 14 ಜೂನ್ 2026
Light
Dark

ವಲಸೆ ವ್ಯಾಪಾರಿಗಳಿಗೆ ಬೆಳಕಾದ ದಸರಾ

ನಗರದಲ್ಲಿ ಸಂಸಾರ ಸಮೇತ ಬಿಡಾರ ಹೂಡಿರುವ ವಲಸೆ ವ್ಯಾಪಾರಿಗಳು

-ಆಕಾಶ್‌ ಆರ್‌.ಎಸ್‌

ಮೈಸೂರು: ಕೊರೊನಾ ಕಾರಣದಿಂದ ಎರಡು ವರ್ಷದಿಂದ ಅದ್ಧೂರಿ ದಸರಾ ಆಚರಣೆ ಇಲ್ಲದೇ ವ್ಯಾಪಾರ, ವ್ಯವಹಾರ ಮಂಗಾಗಿತ್ತು. ಅದರಲ್ಲಿಯೂ ಬೀದಿ ಬದಿಗಳಲ್ಲಿ ವ್ಯಾಪಾರ ಮಾಡುವ ವಲಸೆ ವ್ಯಾಪಾರಿಗಳ ಮುಖದಲ್ಲಿ ನಿರಾಸೆ ತುಂಬಿತ್ತು. ಆದರೆ ಈ ಬಾರಿಯ ಅದ್ಧೂರಿ ದಸರಾ ಇವರ ಬಾಳಲ್ಲಿ ಬೆಳಕು ಚೆಲ್ಲಿದೆ.

ದಸರಾ ಉತ್ಸವದ ಹಿನ್ನೆಲೆಯಲ್ಲಿ ಇಡೀ ನಗರವೇ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಎಲ್ಲಿ ನೋಡಿದರೂ ದೀಪಾಲಂಕಾರ, ಜನಜಂಗುಳಿ, ಪ್ರವಾಸಿಗರಲ್ಲಿ ಹರ್ಷೋದ್ಗಾರ ಮನೆ ಮಾಡಿದೆ. ವಿಭೃಂಜಣೆಯಿಂದ ನಡೆಯುತ್ತಿರುವ ಉತ್ಸವದಲ್ಲಿ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಗಳು, ವೇದಿಕೆ ಕಾರ್ಯಕ್ರಮಗಳೂ ಸಾಗುತ್ತಿವೆ. ಇದನ್ನು ಕಣ್ತುಂಬಿಕೊಳ್ಳಲು ಜನ ಸಾಗರವೇ ಸೇರುತ್ತಿದೆ. ಈ ವೇಳೆಯಲ್ಲಿ ರಸ್ತೆ ಬದಿ ವ್ಯಾಪಾರಿಗಳು, ಸಣ್ಣ ವ್ಯಾಪಾರಿಗಳು ಹಾಗೂ ವಲಸೆ ವ್ಯಾಪಾರಿಗಳು ಒಂದಷ್ಟು ಕಾಸು ಸಂಪಾದನೆ ಮಾಡಲು ಸಹಾಯವಾಗುತ್ತಿದೆ.

ನಗರದ ಹಾರ್ಡಿಂಗ್ ಸರ್ಕಲ್, ಅರಮನೆಯ ಕೋಟೆ ಆಂಜನೇಯ ದೇವಸ್ಥಾನದ ಮುಂಭಾಗ, ದೇವರಾಜ ಅರಸು ರಸ್ತೆ, ಚಿಕ್ಕ ಗಡಿಯಾರ ಸರ್ಕಲ್, ಗನ್ ಹೌಸ್ ಸರ್ಕಲ್, ಸಿಟಿ ಬಸ್ ನಿಲ್ದಾಣ, ಅಗ್ರಹಾರ, ಸಯ್ಯಾಜಿರಾವ್ ರಸ್ತೆ, ದೊಡ್ಡ ಕೆರೆ ಮೈದಾನ ಸೇರಿ ಎಲ್ಲ ಕಡೆಗಳಲ್ಲಿಯೂ ಪಳಪಳ ಮಿನುಗುವ ಬಲೂನ್‌ಗಳು, ಪ್ಲಾಸ್ಟಿಕ್ ಬೊಂಬೆಗಳು, ಪ್ರಾಣಿಗಳ ಮುಖವಾಡ, ಬಣ್ಣ ಬಣ್ಣ ಆಟಿಕೆಗಳು, ಪೀಪಿಗಳು ಸದ್ದು ಮಾಡುತ್ತಿವೆ.

ದಸರಾ ಕೇವಲ ಸಂಭ್ರಮದ ಗೂಡಾಗದೆ ಉತ್ತರ ಪ್ರದೇಶ, ಮಧ್ಯಪ್ರದೇಶ, ಅಸ್ಸಾಂ, ಬಿಹಾರ, ತಮಿಳುನಾಡು ಸೇರಿ ವಿವಿಧ ರಾಜ್ಯಗಳಿಂದ ಆಗಮಿಸಿರುವ ವಲಸೆ ವ್ಯಾಪಾರಿಗಳಿಗೆ ಆಸರೆಯ ಆಚರಣೆಯಾಗಿದೆ. ವಲಸೆಗಾರರು ಸ್ವತಃ ಸ್ವಂತ ಊರಿನ ಜಾತ್ರೆಗೆ ಬರುವಂತೆ ಇಡೀ ಸಂಸಾರದ ಸಮೇತವಾಗಿ ಮೈಸೂರಿಗೆ ಬಂದು ಬಿಡಾರ ಹೂಡಿದ್ದಾರೆ. ರಸ್ತೆ ಬದಿಯಲ್ಲೆ ಹಾಸಿಗೆ ಹಾಕಿಕೊಂಡು ಮಕ್ಕಳನ್ನು ಪಾಲನೆ ಪೋಷಣೆ ಮಾಡುತ್ತಾ, ಅಲ್ಲೇ ಊಟೋಪಚಾರವನ್ನೂ ನಡೆಸುತ್ತಿದ್ದಾರೆ. ಇವರಲ್ಲಿ ಮಹಿಳಾ ವ್ಯಾಪಾರಿಗಳೇ ಹೆಚ್ಚಾಗಿದ್ದು, ಪ್ರವಾಸಿಗರ ಮನವೊಲಿಸಿ ವ್ಯಾಪಾರ ಮಾಡುತ್ತಿರುವ ದೃಶ್ಯ ನಗರದ ಹೃದಯ ಭಾಗದಲ್ಲಿ ಸಾಮಾನ್ಯವಾಗಿದೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!