ಹೊಸೂರು: ತಂಬಾಕು ಹದಗೊಳಿಸುವ ವೇಳೆ ಆಕಸ್ಮಿಕವಾಗಿ ಬೆಂಕಿ ತಗುಲಿ ತಂಬಾಕು ಬ್ಯಾರನ್ ಸಂಪೂರ್ಣವಾಗಿ ಸುಟ್ಟು ಹೋಗಿರುವ ಘಟನೆ ಸಾಲಿಗ್ರಾಮ ತಾಲ್ಲೂಕಿನ ಕುಪ್ಪೆ ಗ್ರಾಮದಲ್ಲಿ ಗುರುವಾರ ನಡೆದಿದೆ.
ಗ್ರಾಮದ ವಿಶ್ವೇಶ್ವರಯ್ಯ ಎಂಬವರಿಗೆ ಸೇರಿದ ತಂಬಾಕು ಹದಗೊಳಿಸುವ ಬ್ಯಾರನ್ ಸುಟ್ಟುಹೋಗಿದ್ದು, ಇದರಿಂದ ಸುಮಾರು ೫ ಲಕ್ಷ ರೂ.ಗಳಷ್ಟು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಶನಿವಾರ ಬೆಳಗಿನ ಜಾವ ಈ ಘಟನೆ ನಡೆದಿದ್ದು, ತಕ್ಷಣವೇ ವಿಶ್ವೇಶ್ವರಯ್ಯ ಕುಟುಂಬಸ್ಥರು, ಗ್ರಾಮಸ್ಥರು ಬೆಂಕಿ ಆರಿಸಿ ಮುಂದೆ ಅಗಬಹುದಾಗಿದ್ದ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಕೆ.ಆರ್.ನಗರ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸಿದರು.
ಘಟನಾ ಸ್ಥಳಕ್ಕೆ ಕಟ್ಟೆಮಳಲವಾಡಿ ವಿಭಾಗದ ತಂಬಾಕು ಮಂಡಳಿಯ ಅಧಿಕಾರಿಗಳಾದ ಸಿದ್ದರಾಜು, ಹರೀಶ್, ಸರ್ವೆ ಅಧಿಕಾರಿ ಆರ್.ಎಸ್.ಪ್ರಕಾಶ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ತಂಬಾಕು ಮಂಡಳಿಯಿಂದ ದೊರೆಯುವ ನಷ್ಟ ಪರಿಹಾರವನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.





