ಎಚ್.ಡಿ.ಕೋಟೆ: ಹುಲಿ ದಾಳಿಗೆ ಸಿಲುಕಿ ಒಂದು ಹಸು ಸಾವನ್ನಪ್ಪಿದ್ದು, ಮತ್ತೊಂದು ಹಸುಗೆ ಗಂಭೀರ ಗಾಯಗಳಾಗಿರುವ ಘಟನೆ ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲ್ಲೂಕಿನ ಹೊಸಹೊಳಲು ಗ್ರಾಮದಲ್ಲಿ ನಡೆದಿದೆ.
ಜಮೀನಿನಲ್ಲಿ ಮೇಯುತ್ತಿದ್ದ ಹಸುಗಳ ಮೇಲೆ ಹುಲಿ ಹಠಾತ್ ದಾಳಿ ನಡೆಸಿದೆ. ಪರಿಣಾಮ ಒಂದು ಹಸು ಸಾವನ್ನಪ್ಪಿದ್ದು, ಮತ್ತೊಂದು ಹಸುವಿನ ಸ್ಥಿತಿ ಗಂಭೀರವಾಗಿದೆ.
ಹುಲಿ ದಾಳಿಯಿಂದ ಆತಂಕಗೊಂಡಿರುವ ಜನರು, ಅರಣ್ಯಾಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೋನು ಅಳವಡಿಸುವ ಭರವಸೆ ನೀಡಿದ್ದಾರೆ.
ಮೊನ್ನೆಯಷ್ಟೇ ಸರಗೂರು ತಾಲ್ಲೂಕಿನ ಮುಳ್ಳೂರು ಗ್ರಾಮದಲ್ಲಿ ಹುಲಿ ದಾಳಿಗೆ ಸಿಲುಕಿ ರೈತ ರಾಜಶೇಖರಮೂರ್ತಿ ಎಂಬುವವರು ಸಾವನ್ನಪ್ಪಿದ್ದರು. ಈ ಘಟನೆ ಮಾಸುವ ಮುನ್ನವೇ ಈ ಭಾಗದಲ್ಲಿ ಮತ್ತೆ ಹುಲಿ ದಾಳಿ ನಡೆಸಿದ್ದು, ಜನತೆಯಲ್ಲಿ ಮತ್ತಷ್ಟು ಆತಂಕ ಉಂಟುಮಾಡಿದೆ.





