ಮೈಸೂರು : ಬೆಂಗಳೂರಿನ ಉಳ್ಳಾಲು ಕೆರೆಯಲ್ಲಿ ಸಾವಿರಾರು ಮೀನುಗಳು ಸಾವನ್ನಪ್ಪಿದ ಬೆನ್ನಿಗೇ ಸಾಂಸ್ಕತಿಕ ನಗರಿಯ ಲಿಂಗಾಬುದಿ ಕೆರೆ ನೀರು ಕಲುಷಿತಗೊಂಡು ಏಕಾಏಕಿ ಸಾವಿರಾರು ಮೀನುಗಳು ಸಾವನ್ನಪ್ಪಿರುವ ಘಟನೆ ಮೈಸೂರು ಪ್ರಾದೇಶಿಕ ಅರಣ್ಯ ವಿಭಾಗದಲ್ಲಿ ನಡೆದಿದೆ.
ಕೆರೆಯಲ್ಲಿದ್ದ ಮೀನುಗಳು ಏಕಾಏಕಿ ಸಾವನ್ನಪ್ಪಿದ್ದು ಕೆರೆ ನೀರು ಕಲುಷಿತಗೊಂಡಿದ್ದರಿಂದಲೇ ಮೀನುಗಳು ಸಾವನ್ನಪ್ಪಿವೆಯೋ ಅಥವಾ ಕಿಡಿಗೇಡಿಗಳು ಕೆರೆಗೆ ವಿಷ ಹಾಕಿದ್ದರಿಂದ ಮೀನುಗಳು ಸಾವನಪ್ಪಿದ್ದಾವೋ ಎನ್ನುವುದು ಇನ್ನೂ ಸ್ಪಷ್ಟವಿಲ್ಲ. ಆದರೆ, ಕೆರೆಯ ದಡದಲ್ಲಿ ಸಾವಿರಾರು ಮೀನುಗಳು ಸತ್ತು ತೇಲುತ್ತಿರುವುದು ಕಂಡುಬಂದಿದೆ. ನೀರು ಕಡಿಮೆಯಾಗಿರುವದರಿಂದ ಆಮ್ಲಜನಕ ಕೊರತೆ ಮತ್ತು ನೀರು ಕಲುಷಿತಗೊಂಡ ಕಾರಣ ಮೀನುಗಳು ಸತ್ತಿರಬಹುದು ಎನ್ನಲಾಗಿದೆ. ಸಾವಿರಾರು ಮೀನುಗಳು ಸತ್ತ ಕಾರಣ ಸುತ್ತಮುತ್ತ ಭಾರೀ ದುರ್ನಾತ ಬೀರುತ್ತಿದೆ.
ಆಮ್ಲಜನಕ ಕೊರತೆ ಕಾರಣ : ಸುಮಾರು 50 ಹೆಕ್ಟೇರ್ ವಿಸ್ತೀರ್ಣದ ಕೆರೆಯಲ್ಲಿ ಹಲವು ವರ್ಷಗಳಿಂದ ಮೀನುಗಾರಿಕೆ ನಡೆಯುತ್ತಿದೆ. ಅಗತ್ಯಕ್ಕಿಂತ ಹೆಚ್ಚು ಮೀನುಗಳ ಸಾಕಣೆ, ಶುಚಿತ್ವದ ಕೊರತೆ ಮೀನುಗಳ ಸಾವಿಗೆ ಕಾರಣ ಎಂದು ಸ್ಥಳೀಯರು ನಾನಾ ರೀತಿಯ ಕಾರಣಗಳನ್ನು ಹೇಳುತ್ತಿದ್ದಾರೆ. ಇನ್ನೂ ಕೆಲವರು, ಈ ವರ್ಷ ಸಾಮಾನ್ಯಕ್ಕಿಂತ ಹೆಚ್ಚು ಉಷ್ಣಾಂಶ ಏರಿಕೆಯಾಗಿರುವುದು ಮೀನುಗಳು ಸಾಯಲು ಕಾರಣವಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೀನುಗಳಿಗೆ ಆಮ್ಲಜನಕ ಎಷ್ಟು ಬೇಕು : ಮೀನುಗಳು ಬದುಕಲು ಪ್ರತೀ ಲೀಟರ್ ನೀರಿನಲ್ಲಿ ಕನಿಷ್ಠ 4 ಮಿಲಿ ಗ್ರಾಂ ಹಾಗೂ ಗರಿಷ್ಠ 6.5 ಮಿಲಿ ಗ್ರಾಂ ಆಮ್ಲಜನಕ ಇರಬೇಕು. ಸದ್ಯ ಕೆರೆಯಲ್ಲಿ ಇದರ ಪ್ರಮಾಣ ಕಡಿಮೆಯಿರುವ ಸಾಧ್ಯತೆಯಿದೆ. ಹಾಗೆಯೇ ಹೆಚ್ಚಿನ ಕ್ಲೋರಿನ್ ಪ್ರಮಾಣ ಕಂಡು ಬಂದಿದ್ದರೆ ಆಗಲೂ ಮೀನುಗಳು ಸಾಯುತ್ತವೆ. ಈ ಬಗ್ಗೆ ಪರೀಕ್ಷೆ ನಡೆಸಬೇಕು ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಮೃತಪಟ್ಟಿರುವ ಮೀನುಗಳ ಹೊರತೆಗೆಯುವಿಕೆ : ಮೀನುಗಳ ಮಾರಣ ಹೋಮದ ಜತೆಗೆ ಕೆರೆ ನೀರು ವಿಷವಾಗಿ ಪರಿವರ್ತನೆಯಾಗಿದೆ. ನೀರಿನಲ್ಲಿ ಮೃತಪಟ್ಟಿರುವ ಸಾವಿರಾರು ಮೀನುಗಳು ನೀರಿನಲ್ಲಿ ಕೊಳೆತು ಕೆರೆಯ ನೀರು ಮತ್ತಷ್ಟು ವಿಷವಾಗುವ ಸಾಧ್ಯತೆ ಇದೆ ಹಾಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳನ್ನೊಳಗೊಂ ಡಂತೆ ಹೊರತೆಗೆಯುವ ಪ್ರಯತ್ನ ಮಾಡುತ್ತಿದ್ದಾರೆ.
ಕಲುಷಿತ ನೀರಿನ ಸಮಸ್ಯೆ : ಹಿಂದಿನಿಂದಲೂ ಕೆರೆಗೆ ಕಲುಷಿತ ನೀರು ಹರಿದು ಬರುತ್ತಿದ್ದು ಇದನ್ನು ತಡೆಯುವ ಪ್ರಯತ್ನ ಇದುವರೆಗೆ ಯಶಸ್ವಿಯಾಗಿಲ್ಲ. ನಾನಾ ಬಡಾವಣೆಗಳ ಒಳಚರಂಡಿ ನೀರೂ ಕೆರೆ ಸೇರುತ್ತಿದೆ ಎಂಬ ಆರೋಪಗಳಿವೆ. ಸ್ಥಳೀಯ ನಿವಾಸಿಗಳು, ಬೆಳಿಗ್ಗೆ ವಾಕಿಂಗ್ ಬರುವವರು ಹಲವು ಸಲ ಈ ಸಂಬಂಧ ಹೋರಾಟ ನಡೆಸಿದ್ದಾರೆ. ಆದರೆ ಕಲುಷಿತ ನೀರು ತಡೆಗೆ ಕಾಯಂ ಪ್ರಯತ್ನ ನಡೆದಿಲ್ಲ.





