ತಿ. ನರಸೀಪುರ : ಪಟ್ಟಣದ ಪ್ರಸಿದ್ಧ ಶ್ರೀ ಗುಂಜನರಸಿಂಹ ಸ್ವಾಮಿ ದೇವಾಲಯದ ಆವರಣದಲ್ಲಿರುವ ಶ್ರೀ ಮಹಾಲಕ್ಷ್ಮಿ ದೇವಿ ಅಮ್ಮನವರ ಗುಡಿಯ ಹುಂಡಿಯಲ್ಲಿದ್ದ ಹಣವನ್ನು ಕದ್ದು ಕಳ್ಳರು ಪರಾರಿಯಾಗಿದ್ದಾರೆ.
ಕಳ್ಳರು ಶ್ರೀ ಗುಂಜನರಸಿಂಹ ಸ್ವಾಮಿ ದೇವಾಲಯದ ಮೇಲಿಂದ ಇಳಿದು, ನಂತರ ಶ್ರೀ ಮಹಾಲಕ್ಷ್ಮಿ ದೇವಾಲಯದ ಗೇಟ್ ಬೀಗವನ್ನು ಮುರಿದು ಒಳ ನುಗ್ಗಿದ್ದಾರೆ. ದೇವಾಲಯದ ಒಳಗೆ ಪ್ರವೇಶಿಸಿದ ಕಳ್ಳರು, ಮಹಾಲಕ್ಷ್ಮಿ ಗುಡಿಯಲ್ಲಿನ ಹುಂಡಿಯನ್ನು ಒಡೆದು ಅದರಲ್ಲಿ ಸಂಗ್ರಹವಾಗಿದ್ದ ನಗದು ಹಣವನ್ನು ಕದ್ದೊಯ್ದಿದ್ದಾರೆ. ಆದರೆ, ಹುಂಡಿಯಲ್ಲಿದ್ದ ಚಿಲ್ಲರೆ ಕಾಸುಗಳನ್ನು ಮಾತ್ರ ಅಲ್ಲಿಯೇ ಬಿಟ್ಟು ಹೋಗಿದ್ದಾರೆ ಎಂದು ದೇವಾಲಯದ ಮೂಲಗಳು ತಿಳಿಸಿವೆ.
ಕಳ್ಳತನದ ಈ ಸಂಪೂರ್ಣ ಕೃತ್ಯವು ದೇವಾಲಯದ ಆವರಣದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ, ಟಿ. ನರಸೀಪುರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:-ಗ್ರಾಮೀಣ ಜನರಿಗೆ ಮಾಹಿತಿ ನೀಡಲು ಗ್ರಾಮದನಿ ಪಾಡ್ಕಾಸ್ಟ್ ಲೋಕಾರ್ಪಣೆ: ಸಚಿವ ಪ್ರಿಯಾಂಕ್ ಖರ್ಗೆ
ಮಾಹಿತಿ ತಿಳಿದ ಕೂಡಲೇ, ಡಿ ವೈ ಎಸ್ ಪಿ ರಘು, ಇನ್ಸ್ಪೆಕ್ಟರ್ ಧನಂಜಯ್, ಮತ್ತು ಸಬ್ ಇನ್ಸ್ಪೆಕ್ಟರ್ ಸೇರಿದಂತೆ ಪೊಲೀಸ್ ಸಿಬ್ಬಂದಿಗಳ ತಂಡ ದೇವಾಲಯಕ್ಕೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದ್ದಾರೆ. ದೇವಾಲಯದ ಭದ್ರತಾ ವ್ಯವಸ್ಥೆ ಮತ್ತು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಕಳ್ಳರ ಪತ್ತೆಗೆ ಜಾಲ ಬೀಸಿದ್ದಾರೆ.
ಈ ಕಳ್ಳತನದ ಘಟನೆಯು ಪಟ್ಟಣದ ಭಕ್ತರು ಮತ್ತು ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಪ್ರಮುಖ ದೇವಾಲಯಗಳ ಭದ್ರತೆ ಬಗ್ಗೆ ಪ್ರಶ್ನೆಗಳು ಎದ್ದಿವೆ.





