ಮೈಸೂರು: ಮಾಜಿ ಸಚಿವ ಶ್ರೀರಾಮುಲು ಅವರು ಕಾಂಗ್ರೆಸ್ ಪಕ್ಷಕ್ಕೆ ಬರಲು ನಿರ್ಧರಿಸಿದರೆ ಸ್ವಾಗತ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ಈ ಬಗ್ಗೆ ಮೈಸೂರಿನಲ್ಲಿಂದು ಮಾತನಾಡಿದ ಅವರು, ಪಕ್ಷದ ಸಿದ್ಧಾಂತವನ್ನು ಒಪ್ಪುವ ಎಲ್ಲರಿಗೂ ಸ್ವಾಗತವಿದೆ. ಆದರೂ ಪಕ್ಷದ ಹೈಕಮಾಂಡ್, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆಶಿ ಅವರು ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆಂದು ಹೇಳಿದರು.
ಸಂಸತ್ ಚುನಾವಣೆ ಸಮಯದಲ್ಲೇ ಶ್ರೀರಾಮುಲು ಕಾಂಗ್ರೆಸ್ಗೆ ಬರುತ್ತಾರೆಂದು ಚರ್ಚೆ ಆಗಿತ್ತು. ಆ ಸಮಯದಲ್ಲಿ ಅವರು ಬರಲಿಲ್ಲ. ಈಗ ಕಾಂಗ್ರೆಸ್ಗೆ ಬರುತ್ತಾರೋ, ಇಲ್ಲವೋ ಗೊತ್ತಿಲ್ಲ. ಒಮ್ಮೆ ಅವರು ಕಾಂಗ್ರೆಸ್ಗೆ ಬಂದರೆ ಸ್ವಾಗತ ಎಂದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಕಾಂಗ್ರೆಸ್ಗೆ ಬೇರೆ ಬೇರೆ ಪಕ್ಷಗಳಿಂದ ಒಂದಷ್ಟು ಜನ ಶಾಸಕರು ಬರುತ್ತಾರೆಂದು ಹೇಳುತ್ತಿದ್ದಾರೆ. ಯಾರೇ ಬಂದರೂ ನಮಗೇನು ಬೇಜಾರಿಲ್ಲ. ನಮ್ಮ ಪಕ್ಷಕ್ಕೆ ಬರುತ್ತೇವೆ ಎನ್ನುವವರಿಗೆ ಮೊದಲು ಸಿಎಂ, ಕೆಪಿಸಿಸಿ ಅಧ್ಯಕ್ಷರ ಬಳಿ ಮಾತನಾಡಬೇಕು ಎಂದು ಹೇಳಿದ್ದೇವೆಂದು ಹೇಳಿದರು.