Mysore
30
overcast clouds

Social Media

ಸೋಮವಾರ, 10 ಆಗಸ್ಟ್ 2026
Light
Dark

ಯುದ್ಧ ಕಾಲದಲ್ಲಿ ಬುದ್ಧ ಪಾಲನೆ ಅಗತ್ಯ : ರೆಹಮತ್‌ ತರಿಕೆರೆ

ಮೈಸೂರು : ಇದು ಯದ್ಧದ ಸಂದರ್ಭ. ಈ ವೇಳೆ ಬುದ್ಧ ಜಯಂತಿ ಆಚರಣೆ ನಡೆಯುತ್ತಿದೆ. ನದಿ ನಿರಿಗಾಗಿ ನಡೆದ ಹೋರಾಟದಲ್ಲಿ ಭಾಗಿಯಾಗಲು ನಿರಾಕರಿಸಿದ ಕಾರಣಕ್ಕಾಗಿ ಬುದ್ಧ ದೇಶ ತ್ಯಾಗ ಮಾಡಿ ವಿಶ್ವಕ್ಕೇ ಬೆಳಕಾದ. ಶಾಂತಿ ಮಂತ್ರವನ್ನು ಪಠಿಸುವ ಬುದ್ಧನ ಜಯಂತಿ ಯುದ್ಧದ ಸಂದರ್ಭದಲ್ಲಿ ಬಂದಿರುವುದನ್ನು ಎಲ್ಲರೂ ಯೋಚಿಸಬೇಕಾಗಿದೆ ಎಂದು ಸಾಹಿತಿ ರೆಹಮತ್‌ ತರಿಕೆರೆ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಶ್ರೀ ಭಗವಾನ್ ಬುದ್ಧ ಜಯಂತ್ಯುತ್ಸವ ಸಮಿತಿ ವತಿಯಿಂದ ಸೋಮವಾರ ನಡೆದ ಬುದ್ಧ ಜಯಂತಿಯಲ್ಲಿ ಅವರು ಮಾತನಾಡಿದರು.

ಬುದ್ದನ ಕಾಲದಿಂದಲೂ, ಬಸವಣ್ಣ, ಅಂಬೇಡ್ಕರ್ ಆದಿಯಾಗಿ ಎಲ್ಲರೂ ರಾಜಕೀಯ ಯುದ್ಧದಿಂದ ವಿಮುಖರಾದಂತೆ ಕಂಡರೂ ಸಾಮಾಜಿಕ ಯುದ್ಧದಿಂದ ವಿಮುಖರಾಗಲು ಸಾಧ್ಯವಾಗಿಲ್ಲ. ಅಸಮಾನತೆ, ಜಾತೀಯತೆ ಇನ್ನೂ ಕಡಿಮೆಯಾಗಿಲ್ಲ ಎಂದು ವಿಷಾದಿಸಿದರು.

ಬುದ್ಧ, ಬಸವ, ಅಂಬೇಡ್ಕರ್, ಕುವೆಂಪು ಹಾಗೂ ಇನ್ನಿದ ದಾರ್ಶನಿಕರ ಆದರ್ಶಗಳನ್ನು ನಾವು ಹೇಳುತ್ತೇವೆ. ಅಧ್ಯಯನ ಮಾಡುತ್ತೇವೆ. ಆದರೆ, ನಾವು ಅವರುಗಳಂತೆ ನಡೆದುಕೊಳ್ಳಲು ವಿಫಲರಾಗಿದ್ದೇವೆ. ಅಂತಹವರ ಆದರ್ಶಗಳನ್ನು ಅಳವಡಿಸಿಕೊಳ್ಳದೆ ಕೇವಲ ಉದ್ಘರಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಹೇಳಿದರು.

ಪ್ರಜ್ಞೆ ಹಾಗೂ ಬುದ್ದಿವಂತಿಕೆ ಎಂಬುದು ಕತ್ತಿ ಇದ್ದ ಹಾಗೆ ಅದರಿಂದ ದೇಶ ಕಟ್ಟಲು ಸಾಧ್ಯವಿಲ್ಲ. ಹೃದಯವಂತಿಕೆ, ತಾಯ್ತನ, ಶೀಲ, ಮೈತ್ರಿ ಇದ್ದರೆ ಮಾತ್ರ ದೇಶ ಕಟ್ಟಲು ಸಾಧ್ಯ ಎಂದು ಬುದ್ಧ ಸೇರಿದಂತೆ ಮಹನೀಯರ ಆಶಯವಾಗಿತ್ತು. ಪ್ರಸ್ತುತ ಅಂತಹ ಮನಸ್ಥಿತಿ ಕಾಣುತ್ತಿಲ್ಲ ಎಂದರು.

ಬುದ್ಧ ಮತ್ತು ಬಸವಣ್ಣ ಅವರು ಎಲ್ಲಾ ಸಮುಧಾಯಗಳನ್ನು ತಮ್ಮ ಜೊತೆಗೆ ಕೊಂಡೊಯ್ಯುತ್ತಿದ್ದರು. ಅಲ್ಲಿ ಕ್ಷತ್ರಿಯರಿದ್ದರು, ಬ್ರಾಹ್ಮಣರಿದ್ದರು, ಚಂಡಾಳರಿದ್ದರು, ದಲಿತರಿದ್ದರು. ಹೀಗೆ ಸಮಾನತೆ ಎಂಬುದನ್ನು ಸಾರುತ್ತಿದ್ದರು. ಅವರ ಆಶಯಗಳು ಇಂದು ಪ್ರಸ್ತುತ ಎಂದು ಹೇಳಿದರು.

ಬುದ್ಧ ಕೇವಲ ದಲಿತರ ಹಾಗೂ ಇನ್ನಿತರರ ಆಸ್ತಿಯಲ್ಲ. ಬುದ್ಧ ಎಲ್ಲರ ಆಸ್ತಿ, ಹೀಗಾಗಿ ಬುದ್ಧ ಜಯಂತಿ ಎಂಬುದು ದಲಿತರ ಹಬ್ಬವಾಗಬಾರದು. ಅದು ಎಲ್ಲರ ಹಬ್ಬವಾಗಿ ಆಚರಣೆಯಾಗಬೇಕು ಎಂದು ತಿಳಿಸಿದರು.

ಇದಕ್ಕೂ ಮುನ್ನ ಬೆಳಿಗ್ಗೆ ಪುರಭವನದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮುಂಭಾಗದಿಂದ ಅದ್ದೂರಿ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ವಟುಗಳು, ಮಹಿಳೆಯರು ಸೇರಿದಂತೆ ನೂರಾರು ಮಂದಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಪುರಭವನದಿಂದ ಕಲಾಮಂದಿರದವರೆಗೆ ಮೆರವಣಿಗೆ ನಡೆಯಿತು.

ಕಾರ್ಯಕ್ರಮದ ಸಾನ್ನಿಧ್ಯವನ್ನು ವಿಶ್ವ ಬುದ್ಧ ಮೈತ್ರಿ ವಿಹಾರದ ಡಾ.ಕಲ್ಯಾಣಸಿರಿ ಬಂತೇಜಿ, ಸೋಮಾನ ಬಂತೇಜಿ ವಹಿಸಿದ್ದರು. ಶಾಸಕ ಟಿ.ಎಸ್.ಶ್ರೀವತ್ಸ, ಅಪರ ಜಿಲ್ಲಾಧಿಕಾರಿ ಪಿ.ಶಿವರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್, ಡಾ.ಜಗನ್ನಾಥ್, ನಂಜುಂಡಯ್ಯ, ಕೆ.ಆರ್.ಗೋಪಾಲಕೃಷ್ಣ, ಇಂದ್ರಮ್ಮ ಮುಂತಾದವರು ಹಾಜರಿದ್ದರು.

Tags:
error: Content is protected !!