Mysore
19
haze

Social Media

ಗುರುವಾರ, 05 ಫೆಬ್ರವರಿ 2026
Light
Dark

ಸೆಪ್ಟಂಬರ್‌ನಲ್ಲಿ ಯಾವ ಕ್ರಾಂತಿಯೂ ಇಲ್ಲ : ಸಚಿವ ರಾಮಲಿಂಗರೆಡ್ಡಿ

ramalinga reddy

ಮೈಸೂರು : ಸೆಪ್ಟಂಬರ್ ತಿಂಗಳಲ್ಲಿ ಯಾವ ಕ್ರಾಂತಿಯೂ ಇಲ್ಲ. ಎಲ್ಲಾ ಬರೀ ಶಾಂತಿ. ಅಭಿವೃದ್ಧಿ ಮಾಡುವುದು ಮುಖ್ಯ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಎಲ್ಲದಕ್ಕೂ ತೆರೆ ಎಳೆದ ಮೇಲೆ ಬೇರೇನೂ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಮೈಸೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹೊಸದಿಲ್ಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನಾನೇ ಐದು ವರ್ಷಗಳ ಕಾಲ ಸಿಎಂ ಎನ್ನುವುದನ್ನು ಹೇಳಿ ಎಲ್ಲಾ ವಿಚಾರಗಳಿಗೂ ಕೊನೆ ಹಾಡಿದ್ದಾರೆ. ಸಚಿವರು, ಶಾಸಕರು ನಾಯಕತ್ವ ವಿಚಾರದಲ್ಲಿ ಮಾತನಾಡದಂತೆ ಹೇಳಲಾಗಿದೆ ಎಂದರು.

ಸಚಿವರ ಕಾರ್ಯವೈಖರಿ ಕುರಿತು ಶಾಸಕರು ದೂರು ಹೇಳಿರುವ ವಿಚಾರ ನನಗೆ ಗೊತ್ತಿಲ್ಲ. ಯಾವ ಶಾಸಕರು ಏನು ಹೇಳಿದ್ದಾರೆ ಎಂಬುದು ನನಗೆ ತಿಳಿದಿಲ್ಲ. ಅವರು ಹೇಳಿರುವ ವಿಚಾರಗಳು ನಮಗೆ ಗೊತ್ತಿದ್ದರೆ ನಿಮಗೆ ಹೇಳುತ್ತಿದ್ದೆ. ನನಗೆ ಏನು ಗೊತ್ತಿಲ್ಲ ಅಂದ ಮೇಲೆ ಅಂತಹ ವಿಚಾರ ಕುರಿತು ಮಾತನಾಡಲ್ಲ ಎಂದು ಪ್ರತಿಕ್ರಿಯಿಸಿದರು.

ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್ ಯಾವ ವಿಚಾರವನ್ನೂ ಹೇಳಿಲ್ಲ. ಅಲ್ಲಿ ಏನಾಗಿದೆ ಎಂಬುದು ತಿಳಿಯದು. ಎಲ್ಲರು ಒಂದೇ ಬಾರಿ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ. ಮುಂದೆ ಅವಕಾಶ ದೊರೆಯಬಹುದು.

ಡಿ.ಕೆ.ಶಿವಕುಮಾರ್ ಹುಟ್ಟು ಕಾಂಗ್ರೆಸ್ಸಿಗ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮವಹಿಸಿದ್ದಾರೆ. ಅದೇ ರೀತಿ ಸಿದ್ದರಾಮಯ್ಯ ಅವರು ಒಳ್ಳೆಯ ನಾಯಕರು. ಸಿದ್ದರಾಮಯ್ಯ ಅವರಿಂದ ಅಭಿವೃದ್ಧಿ ಆಗಿದೆಯೋ,ಇಲ್ಲವೋ ನೀವೇ ಹೇಳಬೇಕೆಂದು ಮಾಧ್ಯಮದವರನ್ನು ಪ್ರಶ್ನಿಸಿದರು.

ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸಲಾಗುತ್ತಿದೆ. ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವ ಒಂದು ಬೇಡಿಕೆ ಬಾಕಿ ಇದೆ. ಉಳಿದಂತೆ ಎಲ್ಲಾ ಬೇಡಿಕೆಗಳನ್ನು ಸರ್ಕಾರ ಈಡೇರಿಸಿದೆ. ಬಿಜೆಪಿ ಸರ್ಕಾರ ಇದ್ದಾಗ ಎರಡು-ಮೂರು ತಿಂಗಳಿಗೊಮ್ಮೆ ಸಂಬಳ ನೀಡಲಾಗುತ್ತಿತ್ತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪ್ರತಿ ತಿಂಗಳು ವೇತನ ನೀಡಲಾಗುತ್ತಿದೆ. ಶಕ್ತಿ ಯೋಜನೆಯಿಂದ ಸಂಸ್ಥೆಗೂ ಆದಾಯ ಬರುತ್ತಿದೆ. ೫,೮೦೦ ಕೋಟಿ ರೂ. ಶಕ್ತಿ ಯೋಜನೆಗೆ ನೀಡಲಾಗಿದೆ. ಮಹಿಳೆಯರಿಗೆ ಇದರಿಂದ ತುಂಬಾ ಅನುಕೂಲವಾಗಿದೆ ಎಂದು ಹೇಳಿದರು.

Tags:
error: Content is protected !!