ಹುಣಸೂರು: ತಾಲ್ಲೂಕಿನ ಸಾಲುಮರದ ತಿಮ್ಮಕ್ಕ ಉದ್ಯಾನವನ ಪಕ್ಕದ ಕಲ್ಬೆಟ್ಟದ ಬಳಿ ಗೋಡೌನ್ ಒಂದರಲ್ಲಿ ೧೮ ಲಕ್ಷ ರೂ. ಮೌಲ್ಯದ ೧,೨೯೬ ಯೂರಿಯಾ ಮೂಟೆಗಳನ್ನು ಅಕ್ರಮವಾಗಿ ಶೇಖರಿಸಿಟ್ಟಿದ್ದ ಖಚಿತ ಮಾಹಿತಿ ಮೇರೆಗೆ ಸೋಮವಾರ ರಾತ್ರಿ ಕೃಷಿ ಇಲಾಖೆಯ ಉಪ ನಿರ್ದೇಶಕ ಧನಂಜಯ, ಸಹಾಯಕ ಕೃಷಿ ನಿರ್ದೇಶಕ ಅನಿಲ್ ಕುಮಾರ್, ಕೃಷಿ ಅಧಿಕಾರಿ ಜೈ ಕುಮಾರ್, ವೆಂಕಟಾಚಲಪತಿ ಹಾಗೂ ಡಿವೈಎಸ್ಪಿ ರವಿ, ಪೊಲೀಸ್ ಇಲಾಖೆಯ ರಾಧಾ ಹಾಗೂ ಬಸಪ್ಪರವರ ನೇತೃತ್ವದಲ್ಲಿ ದಾಳಿ ಮಾಡಿ ಯೂರಿಯಾ ಮೂಟೆಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ. ಜತೆಗೆ ೩ ಲಾರಿಗಳನ್ನು ವಶಕ್ಕೆ ಪಡೆಯಲಾಗಿದೆ.
ಚೀಲ ಬದಲಿಸಿ ಕೇರಳಕ್ಕೆ ಯೂರಿಯಾ ಸಾಗಿಸುವ ಯತ್ನ ಇರಬಹುದು ಎಂದು ಶಂಕಿಸಲಾಗಿದೆ. ಮೂಟೆಗಳನ್ನು ಸಂಗ್ರಹಿಸಿದ ವ್ಯಕ್ತಿಯ ಪತ್ತೆಗೆ ಕ್ರಮ ವಹಿಸಲಾಗಿದೆ ಎಂದು ಅಧಿಕಾರಿ ಅನಿಲ್ ಕುಮಾರ್ ತಿಳಿಸಿದ್ದಾರೆ.





