ಪಿರಿಯಾಪಟ್ಟಣ : ಗೋಮಾಳ ಒತ್ತುವರಿ ತೆರವುಗೊಳಿಸಿ ಸಾರ್ವಜನಿಕ ಉಪಯೋಗಕ್ಕೆ ಅನುವು ಮಾಡಿಕೊಂಡಬೇಕೆಂದು ಒತ್ತಾಯಿಸಿ ಬೆಟ್ಟದತುಂಗಾ ಗ್ರಾಮಸ್ಥರು ತಾಲ್ಲೂಕು ಆಡಳಿತ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಗ್ರಾಮದ ಸ.ನಂ. 118ರಲ್ಲಿ ಬಾಳೆಕಟ್ಟೆ ಜಮೀನಿನಲ್ಲಿ ಸುಮಾರು 2ರಿಂದ 3 ಎಕರೆ ಗೋಮಾಳವನ್ನು ಬಿ.ಟಿ.ಎಂ.ಕೊಪ್ಪಲು ಗ್ರಾಮದ ಸಣ್ಣತಮ್ಮೇಗೌಡ ಎಂಬವರು ಒತ್ತುವರಿ ಮಾಡಿಕೊಂಡಿದ್ದು, ಇವರು ಈಗಾಗಲೇ ಗ್ರಾಮದಲ್ಲಿ ಸರಿ ಸುಮಾರು ೨೫ ಎಕರೆ ಭೂಮಿ ಹಿಡುವಳಿದಾರರಾಗಿದ್ದು, ಗೋಮಾಳವನ್ನು ಅಕ್ರಮಿಸಿಕೊಂಡು ಸರ್ಕಾರಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಗೋಮಾಳ ಒತ್ತುವರಿ ತೆರವಿನ ಬಗ್ಗೆ ಚೆಲುವರಾಜ್ ಎಂಬವರು ತಹಸಿಲ್ದಾರ್ರವರಿಗೆ ದೂರು ಸಲ್ಲಿಸಿದ್ದರೂ ಯಾವುದೇ ಕ್ರಮವಹಿಸದಿರುವುದು ಬೇಸರದ ಸಂಗತಿಯಾಗಿದೆ. ಒತ್ತುವರಿ ಮಾಡಿರುವ ವ್ಯಕ್ತಿಯು ಗೋಮಾಳಕ್ಕೆ ಬಾಳೆ ಗಿಡಗಳನ್ನು ಹಾಕುವುದು ಮತ್ತು ಅಡಕೆ ತೋಟ ಮಾಡಲು ಮುಂದಾಗಿದ್ದಾರೆ. ಆದ್ದರಿಂದ ಈ ಕೂಡಲೇ ಕ್ರಮವಹಿಸಿ ಸಂಬಂಧಪಟ್ಟ ಗೋಮಾಳವನ್ನು ತೆರವು ಮಾಡಿ ಗ್ರಾಮದ ಜಾನುವಾರುಗಳು ಮೇಯಲು ಮತ್ತು ಗ್ರಾಮದ ಎಲ್ಲಾ ಜನರಿಗೆ ಅನುಕೂಲವಾಗುವಂತೆ ಅವಕಾಶ ಕಲ್ಪಿಸಿಕೊಡಬೇಕೆಂದು ಗ್ರಾಮಸ್ಥರು ಒತ್ತಾಯಿತಿಸಿದರು.
ಮನವಿ ಪತ್ರವನ್ನು ಉಪ ತಹಸಿಲ್ದಾರ್ ವಿನೋದ್ ಕುಮಾರ್ ಮತ್ತು ಶಿರಸ್ತೆದಾರ್ ಶಕೀಲಾ ಬಾನು ರವರಿಗೆ ನೀಡಲಾಯಿತು. ಪುರಸಭೆ ನಾಮನಿರ್ದೇಶಿತ ಸದಸ್ಯ ಸಿ.ತಮಣ್ಣಯ್ಯ, ಗ್ರಾಪಂ ಮಾಜಿ ಸದಸ್ಯರಾದ ರಾಜು, ಶಶಿಧರ್, ಮುಖಂಡರಾದ ಚೆಲುವರಾಜ್, ಆರ್.ಡಿ.ಮಹದೇವ್, ಅಬ್ದುಲ್ ವಾಜೀದ್, ಗಣೇಶ, ಕಾಮರಾಜ್, ಚನ್ನಬಸವ, ರಾಜೇಶ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.




