ಮೈಸೂರು: ಹಿಮಾಚಲ ಪ್ರದೇಶದಲ್ಲಿರುವ ಧರ್ಮಶಾಲಾದಲ್ಲಿ ಟಿಬೇಟ್ ನ ಧರ್ಮಗುರು ದಲೈ ಲಾಮಾ ಅವರನ್ನು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಗುರುವಾರ ಭೇಟಿಯಾಗಿ ಮಾತುಕತೆ ನಡೆಸಿದರು.
ಇದೇ ವೇಳೆ ಮಾತನಾಡಿದ ದಲೈ ಲಾಮಾ ಅವರು, ಮೈಸೂರು ವಿವಿಯಲ್ಲಿ ಬುದ್ಧಿಸಂಗೆ ಸಂಬಂಧಪಟ್ಟಂತೆ ಕೋರ್ಸ್ ಗಳು ಶುರುವಾಗಿರುವುದು ಸಂತೋಷದ ವಿಷಯ. ಇದೇ ರೀತಿ ಹಲವು ವಿವಿಗಳಲ್ಲಿ ಬುದ್ಧ ತತ್ವ ಸಾರುವ ಕೋರ್ಸ್ ಗಳು ಆರಂಭವಾಗಬೇಕು. ಜಗತ್ತು ಶಾಂತಿಯಿಂದ ಇರಲು ಬುದ್ಧನ ತತ್ವ ಎಲ್ಲೆಡೆ ಹರಡಬೇಕು ಎಂದರು. ಬುದ್ಧಿಸಂ ಒಂದು ಪಾರಂಪರಿಕ ಚಿಂತನೆ. ಅದಕ್ಕೆ ಆಧುನಿಕ ವಿಷಯಗಳು ಸೇರ್ಪಡೆಯಾದರೆ ಉತ್ತಮ ಶಿಕ್ಷಣವನ್ನು ಮಕ್ಕಳಿಗೆ ನೀಡಿದಂತಾಗುತ್ತದೆ. ಜನರಿಗೂ ಇದು ಇಷ್ಟವಾಗುತ್ತದೆ. ಪಾಶ್ಚಿಮಾತ್ಯ ದೇಶಗಳೂ ಕೂಡ ನಮ್ಮ ಸಂಸ್ಕೃತಿಯನ್ನು ಅನುಸರಿಸುತ್ತಿವೆ. ನಾವೆಲ್ಲರೂ ಸಹೋದರತ್ವದ ಭಾವನೆಯಿಂದ ಇರಬೇಕು ಎಂದು ಕಿವಿಮಾತು ಹೇಳಿದರು.





