Mysore
34
scattered clouds

Social Media

ಭಾನುವಾರ, 19 ಏಪ್ರಿಲ 2026
Light
Dark

ಬೆಲೆ ಏರಿಕೆ, ಭ್ರಷ್ಟಾಚಾರವೇ ಕಾಂಗ್ರೆಸ್‌ ಸಾಧನೆ : ಅಶ್ವಥ್‌ ನಾರಾಯಣ್‌ ವಾಗ್ದಾಳಿ

C. N. Ashwath Narayan

ಮೈಸೂರು : ರಾಜ್ಯ ಸರ್ಕಾರದ ವೈಫಲ್ಯಗಳ ಕುರಿತು ಚಾರ್ಜ್ ಶೀಟ್ ಬಿಡುಗಡೆ ಮಾಡಿದ ಬಿಜೆಪಿ ನಾಯಕ ಸಿ.ಎನ್‌ ಅಶ್ವಥ್‌ ನಾರಾಯಣ್‌, ಬೆಲೆ ಏರಿಕೆ ಹಾಗೂ ಭ್ರಷ್ಟಾಚಾರವೇ ಕಾಂಗ್ರೆಸ್‌ ಸಾಧನೆ ಎಂದು ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಸೋಮವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ನಡೆಸಿ ಮಾತನಾಡಿದ ಅವರು, 2 ವರ್ಷದ ಹಿಂದೆ ಬಹಳಷ್ಟು ನಿರೀಕ್ಷೆಯೊಂದಿಗೆ ರಾಜ್ಯದ ಜನರು ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿದರು. ಆದರೆ, ಕಳೆದೆರಡು ವರ್ಷದಲ್ಲಿ ರಾಜ್ಯದ ಜನರ ಬದುಕನ್ನು ಕಾಂಗ್ರೆಸ್‌ ಬರ್ಬಾತ್‌ ಮಾಡಿದೆ ಎಂದು ಟೀಕಿಸಿದರು.

ಎರಡು ವರ್ಷ ಪೂರೈಸಿದ್ದರಿಂದ ಸಾಧನಾ ಸಮಾವೇಶ ಮಾಡಲು ಮುಂದಾಗಿದ್ದಾರೆ. ಸಿಎಂ ಹಾಗು ಸಚಿವರನ್ನು ಹೊರತುಪಡಿಸಿದರೆ ಬೇರೆ ಯಾರು ಕೂಡ ಸಂತೋಷವಾಗಿಲ್ಲ. ಇದು ವಸೂಲಿ ಸರ್ಕಾರ, ಭ್ರಷ್ಟ ಸರ್ಕಾರ, ಕಮೀಷನ್ ಸರ್ಕಾರ, ಕೆಲವೆಡೆ 60% ಮತ್ತೆ ಕೆಲವೆಡೆ 100% ವಸೂಲಿ ಮಾಡೋ ಸರ್ಕಾರ, ಅಲ್ಪಸಂಖ್ಯಾತರ ತುಷ್ಠೀಕರಣ ಎಂಬುದು ಸೇರಿದಂತೆ ಬೇರೆ ಬೇರೆ ರೀತಿಯಲ್ಲಿ ಕರೆಯಬಹುದು ಎಂದರು.

ಅಭಿವೃದ್ಧಿ ಶೂನ್ಯವೇ ಸಾಧನೆಯಾ?:- ಅಭಿವೃದ್ಧಿ ಶೂನ್ಯ ಸೇರಿದಂತೆ ಹಲವಾರು ರಂಗಗಳಲ್ಲಿ ವಿಫಲವಾಗಿರುವುದೇ ಇವರ ಸಾಧನೆಯಾ? ಯುದ್ದಕ್ಕೆ ಮುನ್ನಾ ಯುದ್ದ ಮಾಡ್ಬೇಡಿ ಎನ್ನೋದು. ಕದನ‌ ವಿರಾಮ ಘೋಷಣೆಯಾದರೆ ಯುದ್ದ ಮಾಡಿ ಅನ್ನೋದು ಇವರ ಧೋರಣೆಯಾಗಿದೆ. ಇವರು ದೇಶಕ್ಕೆ ಅಗೌರವ ತರುವ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಎಲ್ಲಾ ಇಲಾಖೆಯಲ್ಲೂ ಭ್ರಷ್ಟಾಚಾರ ಬೇರೂರಿದೆ:- ಕಾಂಗ್ರೆಸ್ ಕೊಲೆಗಡುಕರ ಸರ್ಕಾರ ಎಂದು ಘಂಟಾಘೋಷವಾಗಿ ಹೇಳಬಹುದಾಗಿದೆ. ಅಮಾಯಕ ಬಡವರಿಗೆ ಆಸ್ಪತ್ರೆಗಳಲ್ಲಿ ಔಷಧಿ ಮಾತ್ರೆ ಸಿಗುತ್ತಿಲ್ಲ. ಕಾರ್ಮಿಕ‌ ಸಚಿವರು ಕಾರ್ಮಿಕರ ಹಣ ತೆಗೆದುಕೊಂಡು ಕಾರ್ಮಿಕರ ಯೋಜನೆಗಳ ಬಗ್ಗೆ ಗೊತ್ತಿಲ್ಲ ಎನ್ನುತ್ತಾರೆ. ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಭ್ರಷ್ಟಾಚಾರ ಬೇರೂರಿದೆ ಎಂದು ಟೀಕಿಸಿದರು.

ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ‌. ಗುತ್ತಿಗೆದಾರರ ಬಳಿ 60% ಕಮೀಷನ್ ಕೇಳ್ತಿದ್ದಾರೆಂದು ಸ್ವತಃ ಗುತ್ತಿಗೆದಾರರು ಆರೋಪಿಸಿದ್ದಾರೆ. ಗ್ಯಾರಂಟಿ ಸರ್ಕಾರ ಎಂದು ಹೇಳಿಕೊಂಡು ಯಾವುದನ್ನು ಗ್ಯಾರಂಟಿಯಾಗಿ ಕೊಡುತ್ತಿಲ್ಲ‌. ರೈತರ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಎಲ್ಲ ಕೈಗಾರಿಕೆಗಳು ರಾಜ್ಯದಿಂದ ಗುಳೆ ಹೋಗುತ್ತಿವೆ. ಇದೊಂದು ದಲಿತ ವಿರೋಧಿ‌, ರೈತ ವಿರೋಧಿ ಸರ್ಕಾರವಾಗಿದೆ. ಯಾವುದೇ ಸಾಧನೆ ಮಾಡದೇ ಜನರನ್ನು ಬರ್ಬಾತ್ ಮಾಡಿದ್ದೇ ಕಾಂಗ್ರೆಸ್ ಸರ್ಕಾರದ ಸಾಧನೆಯಾಗಿದೆ ಎಂದು ಕಟುವಾಗಿ ಟೀಕಿಸಿದರು.

Tags:
error: Content is protected !!