ಮೈಸೂರು : ಭಾನುವಾರವಷ್ಟೇ ಎರಡು ನಗರದ ಎರಡು ಹೋಟೆಲ್ಗಳಿಗೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆಯ ಇ-ಮೇಲ್ ಬಂದಿತ್ತು. ಇದೀಗ ಚಾಮರಾಜನಗರ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ. ಒಂದೇ ವಾರದಲ್ಲಿ ಮೂರನೇ ಬೆದರಿಕೆ ಆಗಿದೆ. ಈ ಎರಡೂ ಕೃತ್ಯಗಳ ಹಿಂದೆ ಒಬ್ಬನೇ ವ್ಯಕ್ತಿ ಇರುವುದು ತಿಳಿದುಬಂದಿದೆ.
ಆರು ತಿಂಗಳ ಹಿಂದೆ ನಗರದ ಜಿಲ್ಲಾ ಪಂಚಾಯಿತಿ ಬಳಿ ಇರುವ ನ್ಯಾಯಾಲಯಕ್ಕೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿತ್ತು. ಪರಿಶೀಲನೆ ನಡೆಸಿದ ನ್ಯಾಯಾಧೀಶರು ಈ ವಿಚಾರವನ್ನು ನಗರ ಪೊಲೀಸ್ ಆಯುಕ್ತರಿಗೆ ತಿಳಿಸಿದ್ದರು. ಬಳಿಕ ಇದೊಂದು ಹುಸಿ ಬೆದರಿಕೆ ಕರೆ ಎಂಬುದು ದೃಢಪಟ್ಟಿತ್ತು.
ಆರು ತಿಂಗಳ ಅವಧಿಯಲ್ಲಿ ಎರಡುಬಾರಿ ಹುಸಿ ಬಾಂಬ್ ಬೆದರಿಕೆ ಬಂದಿದೆ. ಆದರೆ, ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ. ಕಾರಣ ಆರೋಪಿಗಳು ನಕಲಿ ಐಡಿ ಬಳಸಿ ಇ-ಮೇಲ್ ಮೂಲಕ ಬೆದರಿಕೆ ಒಡ್ಡುತ್ತಿದ್ದಾರೆ.
ಆರೋಪಿಗಳು ತಮಿಳುನಾಡು, ಆಂದ್ರಪ್ರದೇಶ, ಉತ್ತರ ಪ್ರದೇಶ ಹೀಗೆ ವಿವಿಧ ಸ್ಥಳಗಳ ವಿಳಾಸವನ್ನು ಐಪಿ ವಿಳಾಸದಲ್ಲಿ ತೋರಿಸಿರುತ್ತಾರೆ. ಆರೋಪಿಗಳ ವಿಳಾಸ ಹುಡಿಕೊಂಡು ಹೋಗುವ ಪೊಲೀಸರಿಗೆ ವಿಳಾಸ ನಕಲಿ ಎಂಬುದು ಗೊತ್ತಾಗುತ್ತದೆ. ಇನ್ನು ಅವರ ಇ-ಮೇಲ್ನಲ್ಲಿ ಯಾವುದೇ ದೂರವಾಣಿ ಸಂಖ್ಯೆ ಇರುವುದಿಲ್ಲ. ಅಥವ ನಕಲಿ ಮೊಬೈಲ್ ಸಂಖ್ಯೆ ದಾಖಲಾಗಿರುತ್ತದೆ. ಹೀಗಾಗಿ ಪೊಲೀಸರು ಅಸಹಾಯಕರಾಗುತ್ತಿದ್ದಾರೆ. ಆದರೂ ನಗರದ ಸೈಬರ್ ವಿಭಾಗ ಅಪರಾಧಿಗಳ ಪತ್ತೆಗೆ ನಿರಂತರ ಪ್ರಯತ್ನ ಹಾಕುತ್ತಿದೆ. ಆರೋಪಿಗಳನ್ನು ಪತ್ತೆ ಹಚ್ಚುತ್ತೇವೆ ಎಂದು ವಿಶ್ವಾಸದಿಂದಲೇ ಹೇಳುತ್ತಾರೆ.




