ಭೇರ್ಯ ಮಹೇಶ್
ಕೆ.ಆರ್.ನಗರ : ಭತ್ತದ ನಾಡು ಎಂದೇ ಪ್ರಖ್ಯಾತಿ ಹೊಂದಿರುವ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲ್ಲೂಕುಗಳಲ್ಲಿ ಇದೀಗ ಭತ್ತದ ಕಟಾವು ಜೋರಾಗಿದ್ದು, ಸುಗ್ಗಿ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ.
ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲ್ಲೂಕುಗಳಲ್ಲಿ ಅಂದಾಜು ೨೪ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈ ಬಾರಿ ಅತ್ಯುತ್ತಮವಾಗಿ ಭತ್ತದ ಬೆಳೆ ಬೆಳೆಯಲಾಗಿದ್ದು, ಎತ್ತ ಕಣ್ಣು ಹಾಯಿಸಿದರೂ ಭತ್ತದ ಸುಗ್ಗಿ ಚಟುವಟಿಕೆಗಳು ಕಂಡುಬರುತ್ತಿವೆ.
ಆದರೆ, ಭತ್ತದ ಕಟಾವಿನೊಂದಿಗೆ ಸುಗ್ಗಿ ಆಚರಿಸಬೇಕಾದ ರೈತರು ಸಕಾಲಕ್ಕೆ ಕೃಷಿ ಕಾರ್ಮಿಕರು ಲಭ್ಯವಾಗದೆ ಕೈಚೆಲ್ಲಿ ಕುಳಿತು ಕೊಳ್ಳುವಂತಾಗಿದೆ. ಅನೇಕ ಕಾರಣಗಳಿಂದ ಕೃಷಿ ಕಾರ್ಮಿಕರ ಕೊರತೆ ಎದುರಾಗಿದೆ. ಇಂತಹ ಸಂದರ್ಭದಲ್ಲಿ ರೈತ ಸಮೂಹದ ನೆರವಿಗೆ ಧಾವಿಸಿರುವ ಭತ್ತ ಕಟಾವಿನ ಬೃಹತ್ ಆಧುನಿಕ ಯಂತ್ರಗಳು ಕೆಲವೇ ದಿನಗಳಲ್ಲಿ ಈ ಪ್ರದೇಶದಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದ ಭತ್ತದ ಕಟಾವನ್ನು ನಡೆಸುವ ಮೂಲಕ ರೈತನಿಗೆ ವರವಾಗಿ ಪರಿಣಮಿಸಲಿವೆ.
ಮೊದಲು ಕಟಾವಿಗೆ, ಬಣವೆ ಒಟ್ಟಲು, ತುಳಿಸಲು ಹೀಗೆ ವಾರಪೂರ್ತಿ ಭತ್ತದ ಕಟಾವಿನಲ್ಲಿ ತೊಡಗುತ್ತಿದ್ದ ರೈತರು ಅದಕ್ಕಾಗಿ ಕಾರ್ಮಿಕರನ್ನು ಹೊಂದಿಸುವಲ್ಲಿ ಹೈರಾಣಾಗುತ್ತಿದ್ದರು. ಕಟಾವಿಗೆ ೧೦ರಿಂದ ೧೨ ಕಾರ್ಮಿಕರು, ಇಷ್ಟೇ ಸಂಖ್ಯೆಯ ಕಾರ್ಮಿಕರು ಬಣವೆ ಒಟ್ಟಲು ಮತ್ತು ತುಳಿಸಲು ಬೇಕಿದ್ದರು. ಇಂತಹ ಸಂಕಷ್ಟಗಳನ್ನೆಲ್ಲ ಸರಿದೂಗಿಸಿ ಕಟಾವಿನ ಸುಗ್ಗಿ ಮುಗಿಸುವಲ್ಲಿ ರೈತರು ಬಸವಳಿಯುತ್ತಿದ್ದರು.
ಇದನ್ನೂ ಓದಿ:-ಅವಳಿ ತಾಲ್ಲೂಕುಗಳಲ್ಲಿ ಭತ್ತದ ಕಟಾವು ಜೋರು
ಆದರೆ ಇದೀಗ ಭತ್ತ ಕಟಾವು ಯಂತ್ರಗಳಿಂದಾಗಿ ವಾರಪೂರ್ತಿ ನಡೆಯುತ್ತಿದ್ದ ಕಟಾವಿನ ಸುಗ್ಗಿ ನೋಡನೋಡುತ್ತಿದ್ದಂತೆಯೇ ಕೆಲವೇ ಗಂಟೆಗಳಲ್ಲಿ ಮುಕ್ತಾಯಗೊಳ್ಳುತ್ತಿದೆ. ಭತ್ತ ಕಟಾವಿಗೆ ಬರುತ್ತಿದ್ದರೂ ಭತ್ತದ ಖರೀದಿ ಕೇಂದ್ರ ಪ್ರಾರಂಭಿಸಿಲ್ಲ ಎಂಬ ಆರೋಪ ರೈತ ಸಂಘಟನೆಗಳಿಂದ ಹೆಚ್ಚಾಗಿ ಕೇಳಿಬರುತ್ತಿದೆ.
ಭತ್ತದ ನಾಡು ಎಂದೇ ಕರೆಯಲ್ಪಡುವ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲ್ಲೂಕುಗಳಲ್ಲಿ ರೈತರು ವಿವಿಧ ತಳಿಯ ಭತ್ತವನ್ನು ಬಿತ್ತಿ ಬೆಳೆದಿದ್ದಾರೆ. ಕೇಂದ್ರ ಸರ್ಕಾರ ಭತ್ತಕ್ಕೆ ಕ್ವಿಂಟಾಲ್ಗೆ ೨,೩೬೯ ರೂ. ಬೆಂಬಲ ಬೆಲೆ ಘೋಷಣೆ ಮಾಡಿದೆ. ಆದರೂ ರೈತರಿಗೆ ದುಬಾರಿ ಖರ್ಚಾಗಿದೆ. ರಾಜ್ಯ ಸರ್ಕಾರ ೫೦೦ ರೂ. ಪ್ರೋತ್ಸಾಹ ಧನ ನೀಡಬೇಕು. ಕೂಡಲೇ ಖರೀದಿ ಕೇಂದ್ರ ತೆರೆದು ಭತ್ತ ಖರೀದಿಸಬೇಕು.
-ಅರ್ಜುನಹಳ್ಳಿ ರಾಮ್ಪ್ರಸಾದ್, ಅಧ್ಯಕ್ಷರು, ತಾಲ್ಲೂಕು ಯುವ ರೈತ ವೇದಿಕೆ
ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲ್ಲೂಕು ಗಳಲ್ಲಿ ಈಗಾಗಲೇ ಶೇ. ೪೦ರಷ್ಟು ಭತ್ತದ ಕಟಾವು ಮುಗಿದಿದೆ. ಭತ್ತದ ಕಟಾವಿಗೆ ಒಂದೆಡೆ ಕೂಲಿ ಕಾರ್ಮಿಕರ ಕೊರತೆ ಇದ್ದರೂ ಆಧುನಿಕ ಯಂತ್ರೋಪಕರಣಗಳಿಂದ ಒಂದೇ ದಿನದಲ್ಲಿ ಭತ್ತ ರೈತರ ಕೈಸೇರುತ್ತಿದೆ. ಆದರೆ ಇದುವರೆಗೂ ಭತ್ತದ ಖರೀದಿ ಕೇಂದ್ರ ತೆರೆಯದೇ ಭತ್ತ ದಲ್ಲಾಳಿಗಳ ಕೈ ಸೇರುತ್ತಿದೆ.
-ಜೆ.ಎಂ.ಕುಮಾರ್, ಗೌರವಾಧ್ಯಕ್ಷ, ರಾಜ್ಯ ರೈತ ಪರ್ವ ಸಂಘ





