ಮೈಸೂರು: ಅಧಿಕೃತ ಭಾಷೆ ಹಿಂದಿಯ ಪ್ರಾದೇಶಿಕ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಜನವರಿ 4 ರಂದು ಬೆಳಿಗ್ಗೆ 10.15ಕ್ಕೆ ಕೆಎಸ್ಒಯು ಘಟಿಕೋತ್ಸವ ಭವನದಲ್ಲಿ ನಡೆಯಲಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಅಧಿಕೃತ ಭಾಷಾ ವಿಭಾಗದ ಜಂಟಿ ನಿರ್ದೇಶಕ ರಾಜೇಶ್ ಕುಮಾರ್ ಶ್ರೀವಾಸ್ತವ್ ತಿಳಿಸಿದರು.
ಇಂದು ನಗರದ ಭಾರತೀಯ ಭಾಷಾ ಸಂಸ್ಥಾನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾರಂಭವನ್ನು ಬಿಹಾರದ ನೂತನ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಉದ್ಘಾಟಿಸುವರು. ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅಧ್ಯಕ್ಷತೆ ವಹಿಸಲಿದ್ದು, ಮೈಸೂರು-ಕೊಡಗು ಲೋಕಾಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸೇರಿದಂತೆ ಇನ್ನಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಸರ್ಕಾರಿ ಕೆಲಸಗಳಲ್ಲಿ ಹಿಂದಿಯ ಪ್ರಗತಿಪರ ಬಳಕೆಯನ್ನು ಉತ್ತೇಜಿಸಲು ಅಧಿಕೃತ ಭಾಷಾ ಇಲಾಖೆಯು ನಿರಂತರ ಪ್ರಯತ್ನಗಳನ್ನು ಮಾಡುತ್ತದೆ ಮತ್ತು ಈ ಅನುಕ್ರಮದಲ್ಲಿ ಪ್ರತಿ ಆರ್ಥಿಕ ವರ್ಷದಲ್ಲಿ ನಾಲ್ಕು ಪ್ರಾದೇಶಿಕ ಅಧಿಕೃತ ಭಾಷಾ ಸಮ್ಮೇಳನಗಳನ್ನು ಆಯೋಜಿಸಲಾಗುತ್ತದೆ. ಇದು 2024-25 ನೇ ಸಾಲಿನ ಮೊದಲ ಕಾರ್ಯಕ್ರಮವಾಗಿದೆ. ದಕ್ಷಿಣ ಮತ್ತು ನೈಋತ್ಯ ಪ್ರದೇಶಗಳಲ್ಲಿ ನೆಲೆಗೊಂಡಿರುವ ವಿವಿಧ ಬ್ಯಾಂಕ್ಗಳು/ಉದ್ಯಮಗಳು/ಕಚೇರಿಗಳು ಅಧಿಕೃತ ಭಾಷೆಯ ಅನುಷ್ಠಾನಕ್ಕಾಗಿ ಮಾಡಿದ ಅತ್ಯುತ್ತಮ ಕೆಲಸಗಳಿಗಾಗಿ ವೇದಿಕೆಯಲ್ಲಿರುವ ಗಣ್ಯರಿಂದ ಪ್ರಶಸ್ತಿಯನ್ನು ನೀಡಲಾಗುವುದು.
ಮಾಹಿತಿ ನಿರ್ವಹಣಾ ವ್ಯವಸ್ಥೆಯ ಮೂಲಕ ಪಡೆದ ತ್ರೈಮಾಸಿಕ ಪ್ರಗತಿ ವರದಿಗಳ ಆಧಾರದ ಮೇಲೆ ಈ ಪ್ರಶಸ್ತಿಗಳನ್ನು ಆಯ್ಕೆ ಮಾಡಲಾಗುತ್ತದೆ. ನಾಳೆ ಪ್ರಶಸ್ತಿ ವಿಜೇತರಿಗೆ ದಕ್ಷಿಣ ಮತ್ತು ನೈಋತ್ಯ ಪ್ರದೇಶಗಳಲ್ಲಿ ಅಧಿಕೃತ ಭಾಷಾ ಕ್ಷೇತ್ರದಲ್ಲಿ ಅವರ ಅತ್ಯುತ್ತಮ ಕೆಲಸಕ್ಕಾಗಿ ಪ್ರಮಾಣಪತ್ರಗಳನ್ನು ನೀಡಿ ಗೌರವಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.





