ಮೈಸೂರು : ನ್ಯಾ.ನಾಗಮೋಹನ್ ದಾಸ್ ಮುಂದಿನ 15 ದಿನಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದು, ಪರಿಶಿಷ್ಟಜಾತಿಯಲ್ಲಿ ಒಳಮೀಸಲಾತಿ ಅನುಷ್ಠಾನ ವಿಳಂಬವಾಗುವುದಿಲ್ಲ.
ಸಚಿವ ಸಂಪುಟದ ಎಲ್ಲಾ ಸಚಿವರು ಒಪ್ಪಿಗೆ ಸೂಚಿಸಿದ್ದು ಮುಖ್ಯಮಂತ್ರಿಯವರು ಒಳ ಮೀಸಲಾತಿ ಅನುಷ್ಠಾನ ಮಾಡಲು ಬದ್ಧರಾಗಿದ್ದಾರೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ನಗರದ ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಿದ್ದ ಕರ್ನಾಟಕ ಮಾದರ ಮಹಾಸಭಾದ ಸದಸ್ಯತ್ವ ನೋಂದಣಿ ಅಭಿಯಾನ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಒಳ ಮೀಸಲಾತಿ ಅನುಷ್ಠಾನಕ್ಕೆ ಅವಿರೋಧವಾಗಿ ತೀರ್ಮಾನ ಮಾಡಿದ್ದು, ಅನುಷ್ಠಾನವಾಗಲು ವಿಳಂಬವಾಗುವುದಿಲ್ಲ ಮಾದರ ಮಹಾಸಭಾದ ರಾಜ್ಯದ ಎಲ್ಲಾ ವಿಭಾಗ ಮಟ್ಟದ ಜಿಲ್ಲೆಗಳಲ್ಲಿ ಸಭೆಯನ್ನು ನಡೆಸಿದ್ದು, ಮೈಸೂರು ವಿಭಾಗದ ಸಭೆ ಕಾರಣಾಂತರಗಳಿಂದ ತಡವಾಗಿತ್ತು ಎಂದರು.
ನಮ್ಮ ಹೋರಾಟದ ಸ್ಪೂರ್ತಿ ಎನ್.ರಾಚಯ್ಯ. ನಮ್ಮ ಊರಿನಲ್ಲಿ ಒಂದು ಗಲಾಟೆಯಾದಾಗ ಬಂದು ಬಗೆಹರಿಸಿದ ಮಹಾನ್ ವ್ಯಕ್ತಿ ಅವರು, ಈ ಹೋರಾಟದ ಸ್ಪೂರ್ತಿ ಅವರಾಗಿದ್ದಾರೆ ಎಂದರು.
ರಾಜಕೀಯದಲ್ಲಿ ಏನೇ ಮಾಡಿದರು ಸಮುದಾಯದ ಪರವಾಗಿ ಏನಾದರು ಮಾಡಬೇಕಲ್ಲಾ ಎಂಬ ಉದ್ದೇಶದಿಂದ ನಾವು ಎಲ್ಲಾ ಸಮುದಾಯಗಳ ಸಂಘಟನೆಯ ಸಂಘವಾಗಿ ಈ ಕರ್ನಾಟಕ ಮಾದರ ಮಹಾಸಭಾದಲ್ಲಿ ಅಧ್ಯಕ್ಷರು, ಪಧಾದಿಕಾರಿಗಳನ್ನು ಹಂತ ಹಂತವಾಗಿ ನೇಮಕಮಾಡಲು ಒಂದು ಬೈಲಾ ಮಾಡಿದ್ದು ಅದರಂತೆ ನಾವು ಮಾಡಲು ಸಿದ್ಧತೆ ಮಾಡಿದ್ದೇವೆ. ಪಕ್ಷಾತೀತವಾಗಿ ಎಲ್ಲಾ ನಾಯಕರು ಸೇರಿ ಈ ಸಮುದಾಯದ ಬಲವರ್ಧನೆಗಾಗಿ ಸಂಘ ಅತ್ಯವಶ್ಯಕವಾಗಿದೆ ಎಂದರು. ನಾವು ಬೆಂಗಳೂರಿನಲ್ಲಿ ಒಂದು ಕೇಂದ್ರ ಸಂಘವನ್ನು ಸ್ಥಾಪಿಸುತ್ತಿದ್ದು, ಅದರ ಮೂಲಕ ಸಂಘಟನೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಸ್ವಾಭಿಮಾನದಿಂದ ತಾವು 500 ರೂ.ಗಳನ್ನು ಸಲ್ಲಿಸಿ ಸದಸ್ಯರಾಗುವ ಮೂಲಕ ಮಹತ್ವದ ಕಾರ್ಯಕ್ಕೆ ಕೈ ಜೋಡಿಸಿ ಪ್ರತಿ ತಾಲ್ಲೂಕಿನಲ್ಲಿ 300 ರಿಂದ 500 ಜನ ಸದಸ್ಯರನ್ನಾಗಿಸಲು ಮುಖಂಡರು ಕ್ರಮವಹಿಸಬೇಕು. ಪ್ರತಿ ಜಿಲ್ಲೆಗೆ ಸಂಯೋಜಕರುಗಳನ್ನು ನೇಮಕ ಮಾಡಿ ಅಲ್ಲಿ ಅಧ್ಯಕ್ಷ ,ಉಪಾಧ್ಯಕ್ಷ ಹಾಗೂ ಪದಾಧಿಕಾರಿಗಳನ್ನು ನೇಮಕಮಾಡಲು ಯೋಜನೆ ರೂಪಿಸುತ್ತಿದ್ದು, ಈ ಸಂಘಕ್ಕೆ ಮುಂದಿನ ದಿನಗಳಲ್ಲಿ ಚುನಾವಣೆ ನಡೆಸುವ ಮೂಲಕ ಅಧ್ಯಕ್ಷ, ಉಪಾಧ್ಯಕ್ಷ, ಪದಾಧಿಕಾರಿಗಳನ್ನು ನೇಮಕ ಮಾಡಲಾಗುತ್ತದೆ. ಅದ್ದರಿಂದ ತಾವೆಲ್ಲರೂ ನೋಂದಣಿ ಕಾರ್ಯದಲ್ಲಿ ಮುಂದಾಗಬೇಕು ಎಂದರು.
ಮಾಜಿ ಸಚಿವ ಕೋಟೆ ಎಂ.ಶಿವಣ್ಣ , ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ವಿಧಾನಪರಿಷತ್ ಮಾಜಿ ಸದಸ್ಯರಾದ ಸಿ.ರಮೇಶ್, ಆರ್.ಧರ್ಮಸೇನ, ಡಾ.ಎಚ್.ನಟರಾಜ್, ಶಿವಪ್ಪ , ಪುರುಷೋತ್ತಮ್, ರಾಮಕೃಷ್ಣ ಹಾಜರಿದ್ದರು.





