Mysore
23
broken clouds
Light
Dark

ನಂಜನಗೂಡು-ಊಟಿ ರಾಷ್ಟ್ರೀಯ ಹೆದ್ದಾರಿ ಬಂದ್

ಮೈಸೂರು : ಕಬಿನಿ ಜಲಾಶಯ ಭರ್ತಿಯಾಗಿರುವ ಹಿನ್ನೆಲೆ ಜಲಾಶಯದಿಂದ ೭೦ ಸಾವಿರ ಕ್ಯೂಸೆಕ್‌ ನೀರು ಬಿಡುಗಡೆ ಮಾಡಲಾಗಿದ್ದು, ಇದರಿಂದಾಗಿ ನಂಜನಗೂಡು ಬಳಿಯ ಮೈಸೂರು ಊಟಿ ರಸ್ತೆ ಬಂದ್‌ ಆಗಿದೆ.

ಚಿಕ್ಕಯ್ಯನ ಛತ್ರ ಗ್ರಾಮದಿಂದ ಮಲ್ಲನಮೂಲೆ ಮಠದ ವರೆಗೆ ರಸ್ತೆ ಸಂಪೂರ್ಣವಾಗಿ ಜಲಾವೃತವಾಗಿದ್ದು,  ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

ಇನ್ನು ಹೆದ್ದಾರಿ ಬಂದ್‌ ಆಗಿರುವ ಕಾರಣ ಮೈಸೂರು ಊಟಿ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಬದಲಿ ಮಾರ್ಗಗಳ ಮೂಲಕ ಸಂಚಾರಕ್ಕೆ  ವ್ಯವಸ್ಥೆಯನ್ನು ಮಾಡಲಾಗಿದೆ. ಮೈಸೂರಿನಿಂದ ನಂಜನಗೂಡು, ಗುಂಡ್ಲುಪೇಟೆ ಕಡೆ ಹೋಗುವ ವಾಹನಗಳು ತಾಂಡವಪುರದ ಬಳಿ ಎಡಕ್ಕೆ ತಿರುಗಿ ಕೆಂಪಿಸಿದ್ದನಹುಂಡಿ, ಹೆಜ್ಜಿಗೆ ಮಾರ್ಗದ ಮೂಲಕ ನಂಜನಗೂಡು ಸಂಚರಿಸಲು ಸೂಚನೆ ನೀಡಲಾಗಿದೆ.

ಗುಂಡ್ಲುಪೇಟೆ, ನಂಜನಗೂಡಿನಿಂದ ಮೈಸೂರಿಗೆ ಬರುವ ವಾಹನಗಳು ಕಲ್ಲಹಳ್ಳಿ ಗೊದ್ದನಪುರದ ಮೂಲಕ ಹೊಸ ಸೇತುವೆ ಮೂಲಕ ಹೋಗಲು ಸೂಚನೆ ನೀಡಲಾಗಿದೆ. ಇನ್ನು ಕೆಲವು ಪ್ರಯಾಣಿಕರಂತು ಬದಲಿ ಮಾರ್ಗ ಹುಡುಕಿಕೊಂಡು ಹೋಗಲು ಸಾಕಷ್ಟು ಪರದಾಟ ನಡೆಸುತ್ತಿದ್ದಾರೆ.