ಮೈಸೂರು: ನಂಜನಗೂಡಿನ ಸುಜಾತಪುರಂ ಬಳಿಯ ರೈಲ್ವೇ ಮೇಲ್ಸೇತುವೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಲೋಡ್ ಟೆಸ್ಟ್ ಬಳಿಕ ಸದ್ಯದಲ್ಲೇ ಸಂಚಾರಕ್ಕೆ ಮುಕ್ತವಾಗಲಿದೆ.
ಆ ಮೂಲಕ ದಶಕಗಳ ಬೇಡಿಕೆಗಳಿಗೆ ಈಗ ಪ್ರತಿಫಲ ದೊರೆಯಲಿದೆ. ದಕ್ಷಿಣ ಕಾಶಿ ನಂಜನಗೂಡಿಗೆ ಬರುವ ಭಕ್ತರು, ಪ್ರವಾಸಿಗರು ಹಾಗೂ ಅಂತರರಾಜ್ಯ ಪ್ರಯಾಣಿಕರು ಈ ಹಾದಿಯಿಂದ ಸುಗಮ ಸಂಚಾರ ದೊರೆಲಿದೆ.
ಮೈಸೂರು-ಚಾಮರಾಜನಗರ ನಡುವೆ ರೈಲುಗಳ ಸಂಖ್ಯೆ ಹೆಚ್ಚಾಗಿದ್ದು, ನಂಜನಗೂಡಿನ ಸುಜಾತಪುರಂ ರೈಲ್ವೇ ಗೇಟ್ ಬಳಿ ವಾಹನಗಳು ನಿಲ್ಲುತ್ತಿದ್ದರಿಂದ ಹೆದ್ದಾರಿಯಲ್ಲಿನ ಸಂಚಾರಕ್ಕೂ ಅಡ್ಡಿಯಾಗುತ್ತಿತ್ತು. ಜತೆಗೆ ಪದೇಪದೆ ಗೇಟ್ ಹಾಕುತ್ತಿದ್ದರಿಂದ ಸವಾರರು ರೋಸಿದ್ದರು. ಹಾಗಾಗಿ ದಶಕಗಳಿಂದ ಮೇಲ್ಸೇತುವೆಗಾಗಿ ಸಾಕಷ್ಟು ಪ್ರತಿಭಟನೆಗಳು ನಡೆದಿದ್ದವು. ಸ್ಥಳೀಯ ಜನಪ್ರತಿನಿಧಿ, ಅಧಿಕಾರಿಗಳು ಸೇರಿದಂತೆ ಸಚಿವರಿಗೂ ಮನವಿ ಸಲ್ಲಿಸಲಾಗಿತ್ತು. ಸದ್ಯ ಎಲ್ಲವೂ ಮುಕ್ತಾಯ ಹಂತಕ್ಕೆ ಬಂದಿದ್ದು, ಚಾಮರಾಜನಗರ-ಮೈಸೂರು ಕಡೆ ಸಂಚಾರಿಸುವವರಿಗೆ ಇನ್ಮುಂದೆ ರೈಲು ಗೇಟ್ ಕಾಯುವ ತಲೆ ನೋವು ಇರುವುದಿಲ್ಲ.