ಮೈಸೂರು: ಸಾಹಿತ್ಯ ಮತ್ತು ಚಲನಚಿತ್ರಕ್ಕೂ ಸಾಮಾಜಿಕ ಜವಾಬ್ದಾರಿ ಇದೆ. ಇವರೆಡರ ಸಂಬಂಧ ಹೆಚ್ಚಾದರೆ ಮಾತ್ರ ಸಮಾಜಕ್ಕೆ ಹೊಸ ಉತ್ಪನ್ನ ದೊರೆಯಲಿದೆ ಎಂದು ಸಾಹಿತಿ ಡಾ.ನಾಗತಿಹಳ್ಳಿ ಚಂದ್ರಶೇಖರ್ ಅಭಿಪ್ರಾಯಪಟ್ಟಿದ್ದಾರೆ.
ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯ ಯುಜಿಸಿ ಅಧ್ಯಯನ ಕೇಂದ್ರದ ಸಭಾಂಗಣದಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ವತಿಯಿಂದ ಇಂದು(ಜನವರಿ.21) ಆಯೋಜಿಸಲಾಗಿದ್ದ ಕನ್ನಡ ಸಾಹಿತ್ಯ ಮತ್ತು ಚಿತ್ರಕತೆ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಬರಹಗಾರ ಅನುಭವ, ಕಲ್ಪನೆಯಿಂದ ಸಂಶೋಧನೆ ಮಾಡಿ ಏಕಾಂಗಿಯಾಗಿ ತನ್ನ ಕೃತಿಯನ್ನು ರಚಿಸುತ್ತಾನೆ. ಲೇಖಕ ಸ್ವಯಂಭು. ಆತನು ತನ್ನ ಅನುಭವ ಮತ್ತು ಕಲ್ಪನೆಗಳನ್ನು ಸಮನ್ವಯಗೊಳಿಸಿ ಕೃತಿ ರಚಿಸುತ್ತಾನೆ. ಸಿನಿಮಾ ಒಂದು ಸಮೂಹ ಕಲೆಯಾಗಿದೆ. ಅಲ್ಲದೇ ನಿರ್ದೇಶಕ ತನ್ನೊಂದಿಗೆ ಹತ್ತಾರು ಜನರನ್ನು ಕಟ್ಟಿಕೊಳ್ಳುತ್ತಾನೆ. ಜೊತೆಗೆ ಆತನು ಹತ್ತಾರು ಸಮಸ್ಯೆ, ಸವಾಲು ಹಾಗೂ ತಾಂತ್ರಿಕ ವಿಚಾರಗಳಿಗೆ ಆದ್ಯತೆ ನೀಡಬೇಕಾಗುತ್ತದೆ ಎಂದು ಹೇಳಿದರು.
ಸಾಹಿತ್ಯದಲ್ಲಿ ಶೇ.95 ವಿಚಾರವಿದ್ದರೆ, ಶೇ.5ರಷ್ಟು ಭಾಗ ವ್ಯವಹಾರ ಇರುತ್ತದೆ. ಆದರೆ ಚಲನಚಿತ್ರದಲ್ಲಿ ಶೇ.95ರಷ್ಟು ವ್ಯವಹಾರವಿದ್ದರೆ, ಶೇ.5ರಷ್ಟು ಮಾತ್ರ ವಿಚಾರ ಇರಲಿದೆ. ಹೀಗಾಗಿ ಒಬ್ಬ ಲೇಖಕನಿಗೆ ಒಂದು ಪೆನ್ಸಿಲ್ ದೊರೆತರೆ ಅದ್ಭುತ ಕಾವ್ಯ ರಚಿಸಬಲ್ಲ. ಆದರೆ, ಸಿನಿಮಾಗಳಿಗೆ ದೊಡ್ಡ ಆರ್ಥಿಕ ಭಾರ ಇರುತ್ತದೆ. ಹಾಗಾಗಿ ಒಂದು ಸಿನಿಮಾ ಮಾಡುವಾಗ ವ್ಯವಹಾರದ ಜ್ಞಾನ ತಿಳಿದುಕೊಂಡೇ ಹೆಜ್ಜೆ ಇಡಬೇಕು. ಹಣ ಕೊಟ್ಟ ನಂತರವೇ ಚಿತ್ರಮಂದಿರಕ್ಕೆ ಪ್ರವೇಶ ನೀಡಲಾಗುತ್ತದೆ. ಈ ವ್ಯಾಕರಣದ ಬಗ್ಗೆ ತಿಳಿದಿರಬೇಕು ಎಂದರು.
ಇನ್ನೂ ಸಿನಿಮಾ ನಿರ್ದೇಶಕರು ಸಾಹಿತ್ಯ ಕೃತಿ ಆಯ್ಕೆ ಮಾಡಿಕೊಂಡಾಗ ಲೇಖಕರೊಂದಿಗೆ ಮುಕ್ತ ಸಂವಾದ ಮಾಡಬೇಕು. ಬದಲಾವಣೆ ಮಾಡುವ ಬಗ್ಗೆ ಸ್ಪಷ್ಟವಾಗಿ ತಿಳಿಸಬೇಕು. ಎಲ್ಲೆಲ್ಲಿ ಬದಲಾವಣೆ ಮಾಡುತ್ತೇನೆ ಎಂಬುದನ್ನು ವಿವರಿಸಬೇಕು. ಸಾಹಿತ್ಯ ಮತ್ತು ನಾಟಕಗಳಿಗೆ ಸೆನ್ಸಾರ್ ಇಲ್ಲ. ಸಿನಿಮಾಗಳಿಗೆ ಸೆನ್ಸಾರ್ ಇದೆ. ಸರ್ಕಾರ ಕುಚೇಷ್ಠೆ ಮಾಡುತ್ತಾರೆಂದು ಕಣ್ಣಿಟ್ಟಿರುತ್ತದೆ. ಸೆನ್ಸಾರ್ ಮಂಡಳಿ ಎಷ್ಟೇ ಚಾಪೆ ಹಾಸಿದರೂ ರಂಗೋಲಿ ಕೆಳಗೆ ನುಸುಳುವುದು ಸಿನಿಮಾದವರಿಗೆ ಕರಗತವಾಗಿದೆ ಎಂದು ತಿಳಿಸಿದರು.