ಮೈಸೂರು : ಸುಳ್ಳು ಆರೋಪ, ಆಧಾರರಹಿತ ಬಾಷಣ, ಧಾರ್ಮಿಕ ಭಾವನೆಗಳನ್ನ ಪ್ರಚೋದಿಸಿ ನನ್ನ ಶಾಂತಿಯುತ ಜೀವ ಭದ್ರತೆಗೆ ಧಕ್ಕೆ ಉಂಟು ಮಾಡಿರುವ ಉಡುಪಿ ಮೂಲದ ವಸಂತ ಗಿಳಿಯಾರ್ ವಿರುದ್ದ ಸೂಕ್ತ ಕ್ರಮ ಕೈಘೊಳ್ಳುವಂತೆ ಒಡನಾಡಿ ಸೇವಾಸಂಸ್ಥೆ ನಿರ್ದೇಶಕ ಸ್ಟ್ಯಾನ್ಲಿ ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ವಸಂತ ಗಿಳಿಯಾರ್ ಅವರು ತಮ್ಮ ಭಾಷಣದಲ್ಲಿ ನನ್ನನ್ನು ಕ್ರೈಸ್ತ ಧರ್ಮದವನೆಂದು ಗುರುತಿಸಿದ್ದಾನೆ. ಧರ್ಮಸ್ಥಳವನ್ನು ಹಂದಿ ಹೊಡೆದಂತೆ ಹೊಡೆಯಬೇಕೆಂದು ಹೇಳಿಕೆ ನೀಡಿದ್ದಾರೆ. ಹಿಂದು ಧರ್ಮ ಹಾಗೂ ದೇವಸ್ಥಾನವನ್ನು ಹೊಡೆಯಲು ಬಂದಿದ್ದಾನೆ ಎಂದು ಜಾಲತಾಣಗಳು, ಮಾಧ್ಯಮಗಳು, ಸಭೆಗಳಲ್ಲಿ ನನ್ನ ವಿರುದ್ಧ ಅಪಪ್ರಚಾರ ಮಾಡಿದ್ದಾರೆ.
ಸುಳ್ಳು ಸುದ್ದಿಗಳನ್ನ ಹರಡುವ ಮೂಲಕ ಕೋಮುದ್ವೇಷ ಉಂಟು ಮಾಡುತ್ತಿದ್ದಾರೆ. ಸಮಾಜದ ಒಂದು ಭಾಗವನ್ನು ಎತ್ತಿಕಟ್ಟುತ್ತಿದ್ದಾರೆ, ಧಾರ್ಮಿಕ ಭಾವನೆಗಳನ್ನ ಪ್ರಚೋದಿಸಿ ಜನರನ್ನ ಕೆಣಕುವಂತೆ ಮಾಡಿದ್ದು, ನನ್ನ ಜೀವ ಭದ್ರತೆಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಆರೋಪಿಸಿ ಸ್ಟ್ಯಾನ್ಲಿ ಅವರು ವಿವಿದ ಸೆಕ್ಷನ್ಗಳ ಅಡಿಯಲ್ಲಿ ವಸಂತ ಗಿಳಿಯಾರ್ ವಿರುದ್ದ ದೂರು ನೀಡಿದ್ದಾರೆ.
ದೂರು ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಒಡನಾಡಿ ಸಂಸ್ಥೆ ನಿರ್ದೇಶಕ ಸ್ಟ್ಯಾನ್ಲಿ, ನಗರದ ಹೂಟಗಳ್ಳಿಯ ಎಸ್.ಆರ್.ಎಸ್.ಕಾಲೋನಿಯಲ್ಲಿರುವ ಒಡನಾಡಿ ಸೇವಾ ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿಯಾಗಿ ಹಾಗೂ ನಿರ್ದೇಶಕರಲ್ಲಿ ಒಬ್ಬನಾಗಿ ಕಳೆದ ೩೫ ವರ್ಷಗಳಿಂದ ಮಹಿಳೆಯರ ಮತ್ತು ಮಕ್ಕಳ ಮೇಲಿನ ಲೈಂಗಿಕ ಶೋಷಣೆಯ ವಿರುದ್ಧ ಕಾನೂನು ಬದ್ರವಾಗಿ ಹಾಗೂ ಸರ್ಕಾರಿ ಇಲಾಖೆಗಳ ಜೊತೆ ಸೇರಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದರು.
ಬಹಳ ಮುಖ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದಲ್ಲಿ ನಡೆದಿದ್ದ ಸೌಜನ್ಯ ಎಂಬ ಅಪ್ರಾಪ್ತ ಹುಡುಗಿಯ ಪಹರಣ, ಅತ್ಯಾಚಾರ ಹಾಗೂ ಹತ್ಯೆಗೆ ಯಾವುದೇ ರೀತಿಯ ನ್ಯಾಯ ಲಭಿಸದೆ ಇರುವ ಕಾರಣ ಸಾಮಾಜಿಕ ಹೋರಾಟವೊಂದು ರಾಜ್ಯಾದ್ಯಂತ ನಡೆಯುತ್ತಿದೆ.
ಸ್ವಾಭಾವಿಕವಾಗಿಯೇ ಮಹಿಳಾ ಪರವಾದ ಒಡನಾಡಿ ಸಂಸ್ಥೆ ಹಾಗೂ ನಾನು ನೈತಿಕ ಹೊಣೆಗಾರಿಕೆಯೊಡನೆ ಆ ನತದೃಷ್ಟ ಬಾಲಕಿಗೆ ಸಿಗಬೇಕಾದ ಅನುಶಾಸನಬದ್ಧ ನ್ಯಾಯಕ್ಕಾಗಿ ನಮ್ಮನ್ನು ನಾವು ತೊಡಗಿಸಿಕೊಂಡು ಕಾನೂನಿನ ವ್ಯಾಪ್ತಿಯಲ್ಲಿ ಸಂವಿಧಾನಾತ್ಮಕವಾದ ಇರಾಟವನ್ನು ನಡೆಸುತ್ತಾ ಬರುತ್ತಿದ್ದೇವೆ.
ಈ ಹಿನ್ನೆಲೆಯಲ್ಲಿ ವಸಂತ ಗಿಳಿಯಾರ್ ಎಂಬಾತ ಧರ್ಮದಂಗಲ್ ನಡೆಸಲು ಕಾರಣನಾಗುತ್ತಿದ್ದಾನೆ. ಅವನಿಗೆ ಬುದ್ಧಿ ಬರಬೇಕು ಅಂತ ಎಫ್ಐಆರ್ ಮಾಡಿಸಿರುವೆ. ನನ್ನ ವಿರುದ್ಧ ಹಲವು ಬಾರಿ ವೈಯಕ್ತಿಕ ದ್ವೇಷ ಕಾರುತ್ತಿದ್ದಾನೆ. ಜಾಲತಾಣದಲ್ಲಿ ಹೇಳಿಕೆ ತಿರುಚಿ ನನ್ನ ಘನತೆಗೆ ಧಕ್ಕೆ ತಂದಿದ್ದಾನೆ. ಎರಡು ಬಾರಿ ನೋಟಿಸ್ ಕಳಿಸಿದ್ದರೂ ಪ್ರತಿಕ್ರಿಯೆ ನೀಡಿರಲಿಲ್ಲ. ಈ ಕಾರಣಕ್ಕೆ ಎಫ್ಐ ಆರ್ ದಾಖಲಿಸಿರುವೆ. ಆತನಿಗೆ ಒಳ್ಳೆ ಬುದ್ಧಿ ಬರಲಿ ಅಂತ ಎಫ್ಐಆರ್ ಮಾಡಿರುವೆ ಎಂದು ತಿಳಿಸಿದ್ದಾರೆ.





