Mysore
24
scattered clouds

Social Media

ಗುರುವಾರ, 05 ಫೆಬ್ರವರಿ 2026
Light
Dark

ನೂತನ ಶೌಚಾಲಯ ಸ್ವಾಗತಕ್ಕೆ ಮ-ನರೇಗಾ ನೆರವು

narega-yojana-news

ಮೈಸೂರು : ಜಿಲ್ಲೆಯೆಲ್ಲೆಡೆ ಅಂಗನವಾಡಿ ಹಾಗೂ ಶಾಲೆಗಳು ತೆರೆದುಕೊಂಡ ಈ ಹೊತ್ತಲ್ಲಿ ಅಲ್ಲೊಂದು ಪ್ರಾಥಮಿಕ ಶಾಲಾ ಕೇಂದ್ರದಲ್ಲಿ ನೂತನ ಶೌಚಾಲಯಗಳೊಂದಿಗೆ ಚಿಣ್ಣರನ್ನು ಬರ ಮಾಡಿಕೊಂಡಿದ್ದು, ಇದಕ್ಕೆ ನರೇಗಾ ನೆರವಾಗಿ ನಿಂತಿದೆ.

ಹೌದು, ಮಹಾತ್ಮಗಾಂಧಿಯವರ ಕನಸಿನಂತೆ ಅಭಿವೃದ್ಧಿ ಎಂಬುದು ಗ್ರಾಮಗಳಿಂದಲೇ ಆಗಬೇಕೆಂಬ ಪರಿಕಲ್ಪನೆಯಲ್ಲೇ ಮುಂದೆ ಸಾಗುತ್ತಿರುವ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಶಾಲೆಗಳ ಅಭಿವೃದ್ಧಿಯ ನೆರವಿಗೆ ಸಹಕಾರಿಯಾಗಿದೆ. ಇಂತಹದೊಂದು ಪ್ರಯತ್ನ ಯಶಸ್ವಿಯಾಗಿರುವುದು ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ಮಲಿಯೂರು ಗ್ರಾಮ ಪಂಚಾಯಿತಿಯ ಮೇಗಳಕೊಪ್ಪಲು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಗಿದೆ.

ಇದನ್ನೂ ಓದಿ: ಮ-ನರೇಗಾ ಯೋಜನೆ ; ಶೇ.102 ರ ಗುರಿ ಸಾಧಿಸಿದ ಮಂಡ್ಯ

ದುಸ್ಥಿತಿಯಲ್ಲಿದ್ದ ಶೌಚಾಲಯ: ಹಲವು ವರ್ಷಗಳಿಂದ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯಿದ್ದು, 15 ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ಶೌಚಾಲಯ, ಪ್ರಸ್ತುತ ಬಳಕೆಗೆ ಯೋಗ್ಯವಾಗಿರಲಿಲ್ಲ, ಅಲ್ಲದೇ ಶೌಚಾಲಯಕ್ಕೆ ನೀರಿನ ವ್ಯವಸ್ಥೆಯ ಇರಲಿಲ್ಲ, ಮಕ್ಕಳು ಬಳಸಲು ಕಷ್ಟ ಸಾಧ್ಯವಾಗಿತ್ತು. ಇದನ್ನು ಅರಿತ ಮುಖ್ಯೋಪಾಧ್ಯಾಯರು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಗಮನಕ್ಕೆ ತಂದು ಶೌಚಾಲಯ ನಿರ್ಮಾಣಕ್ಕೆ ಮುಂದಡಿಯಿಟ್ಟರು.

ಇದರ ಪ್ರತಿಫಲದ ಫಲವಾಗಿ 2023-24ನೇ ಸಾಲಿನಲ್ಲಿ 5.20 ಲಕ್ಷ ರೂ.ಗಳ ಕ್ರಿಯಾ ಯೋಜನೆ ಸಿದ್ದಪಡಿಸಿ ಪುರುಷ ಹಾಗೂ ಹೆಣ್ಣು ಮಕ್ಕಳ ಸುಸಜ್ಜಿತ ಶೌಚಾಲಯಗಳ ನಿರ್ಮಾಣಕ್ಕೆ ಚಾಲನೆ ನೀಡಿದರು.

ಇದರ ಪ್ರತಿಫಲವಾಗಿ 2024-25ನೇ ಸಾಲಿಗೆ ಕಾಮಗಾರಿ ಪೂರ್ಣಗೊಂಡು, ಈ ಸಾಲಿನಲ್ಲಿ ಆಗಮಿಸಿದ ಚಿಣ್ಣರು, ಮಕ್ಕಳನ್ನು ನೂತನ ಶೌಚಾಲಯಗಳು ಸಂತಸದಿಂದ ಸ್ವಾಗತಿಸಿದೆ.

ನೂತನ ಶೌಚ ಕಂಡ ಮಕ್ಕಳು ಸಂತಸದಿಂದಲೇ ನಮ್ಮ ಶಾಲೆ ಯಾವುದಕ್ಕೂ ಕಮ್ಮಿ ಇಲ್ಲ ಎಂಬಂತೆ ಸಂಭ್ರಮಿಸುವ ಮೂಲಕ ಮ-ನರೇಗಾ ಯೋಜನೆ ಅನುಷ್ಠಾನದ ಸದ್ದಿಲ್ಲದೆ ತನ್ನ ಸಾಧನೆ ಮಾಡಿ ತೋರಿಸಿದೆ.

ಸರ್ಕಾರಿ ಶಾಲೆಗಳತ್ತ ಮಕ್ಕಳು ಬರುವುದಿಲ್ಲ ಎನ್ನುವ ನಾವು ಮೊದಲು ಶಾಲೆಯಲ್ಲಿ ಮಕ್ಕಳಿಗೆ ಖಾಸಗಿ ಶಾಲೆಯ ಮಾದರಿ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರಿ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಈ ದಿಸೆಯಲ್ಲಿ ಮ-ನರೇಗಾ ನಮ್ಮ ಶಾಲ್ಲೆಯಲ್ಲಿ 30 ಮಂದಿ ಮಕ್ಕಳಿದ್ದು, ಈಗ ಶೌಚಾಲಯದಲ್ಲಿ ಹೊಸ ಹೆಜ್ಜೆ ಇರಿಸಿರುವುದು ಸಂತಸ ತರಿಸಿದೆ. – ರಾಮು, ಶಾಲಾ ಮುಖ್ಯಶಿಕ್ಷಕ, ಸ.ಕಿ.ಪ್ರಾ.ಶಾಲೆ, ಮೇಗಳಕೊಪ್ಪಲು ಗ್ರಾಮ.

ಶಾಲಾ ಮುಖ್ಯ ಶಿಕ್ಷಕಿಯವರು ಇಂತಹದೊಂದು ಸಮಸ್ಯೆ ತಿಳಿಸಿದಾಗ ಬಳಿಕ ಮ-ನರೇಗಾ ಯೋಜನೆ ಬಗ್ಗೆ ಮನವರಿಕೆ ಮಾಡಿಕೊಟ್ಟು ಅದರಿಂದ ಕಾಮಗಾರಿ ಪ್ರಾರಂಭಿಸಿ ಈಗ ಮಕ್ಕಳಿಗೆ ಹೊಸ ಶೌಚಾಲಯ ಲಭ್ಯಕ್ಕೆ ಸಿಕ್ಕಿರುವುದರಿಂದ ಎಲ್ಲರಿಗೂ ಖುಷಿಯಾಗಿದೆ. ಶಾಲಾ ಶೌಚಾಲಯ, ಕಾಂಪೌಂಡ್ ಹಾಗೂ ಕಟ್ಟಡದಲ್ಲಿಯೂ ನರೇಗಾ ಅನುದಾನ ಬಳಕೆ ಮಾಡಿಕೊಂಡು ಶಾಲೆಗಳ ಅಭಿವೃದ್ಧಿ ಸಾಧಿಸಬಹುದು ಎಂಬುದಕ್ಕೆ ಇದು ಉದಾಹರಣೆಯಾಗಿದೆ.

– ಅನಂತರಾಜು ಪಿ.ಎಸ್., ಕಾರ್ಯ ನಿರ್ವಾಹಕ ಅಧಿಕಾರಿ, ತಿ.ನರಸೀಪುರ ತಾಲ್ಲೂಕು

ಜಿಲ್ಲೆಯಲ್ಲಿ ಮ-ನರೇಗಾ ಕಾರ್ಯ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಅದರಲ್ಲೂ ಅನೇಕ ಶಾಲೆಗಳಲ್ಲಿ ಕಟ್ಟಡ ಸಮಸ್ಯೆಗಳಿದ್ದು, ನರೇಗಾ ಮೂಲಕ ಅವುಗಳ ನಿವಾರಿಸಿಕೊಳ್ಳಲು ಆಯಾ ಶಿಕ್ಷಕರು ಹಾಗೂ ಪಂಚಾಯಿತಿ ಅಧಿಕಾರಿಗಳು ಮುಂದೆ ಬಂದರೆ ಸರ್ಕಾರಿ ಶಾಲೆಗಳ ತಾನಾಗಿಯೇ ಅಭಿವೃದ್ಧಿ ಕಾಣಲಿವೆ. ಇಂತಹ ಅಭಿವೃದ್ಧಿ ಕಾರ್ಯಕ್ಕೆ ಮ-ನರೇಗಾ ಯೋಜನೆ ಮುಕ್ತವಾಗಿದೆ.

-ಎಸ್. ಯುಕೇಶ್ ಕುಮಾರ್, ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯಿತಿ , ಮೈಸೂರು.

Tags:
error: Content is protected !!