ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರನ್ನು ಯೋಗ ನಗರವನ್ನಾಗಿಸುವ ಕಾಲ ಸನ್ನಿಹಿತವಾಗಿದೆ ಎಂದು ಮಂಡ್ಯ ಸರ್ಕಾರಿ ಆಯುರ್ವೇದ ಆಸ್ಪತ್ರೆ ಹಿರಿಯ ವೈದ್ಯಕೀಯ ಅಧಿಕಾರಿ ಡಾ.ಸೀತಾಲಕ್ಷ್ಮಿ ಹೇಳಿದರು.
ನಗರದ ಜಿಎಸ್ಎಸ್ಎಸ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಮಹಿಳಾ ಮಹಾವಿದ್ಯಾಲಯದಲ್ಲಿ ವೈಜ್ಞಾನಿಕ ಪ್ರಾಣಾಯಾಮ -ಫೌಂಡೇಶನ್ ಟ್ರಸ್ಟ್, ಎಟಿಎಂ ಇಂಜಿನಿಯರಿಂಗ್ ಕಾಲೇಜು, ಬೆಂಗಳೂರಿನ ಆರ್ವಿ ಇಂಜಿನಿಯರಿಂಗ್ ಕಾಲೇಜು ಮತ್ತು ಭಾರತೀಯ ಯೋಗ ಸಂಘಟನೆಗಳ ಸಹಕಾರದಲ್ಲಿ ಅಂತಾ ರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಎರಡು ದಿನಗಳ ರಾಜ್ಯಮಟ್ಟದ ವಿಚಾರ ಸಂಕಿರಣ ‘ಯೋಗ ಪ್ರಾಣೋತ್ಸವ-೨೦೨೫’ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರಸ್ತುತ ಎಲ್ಲರೂ ಒತ್ತಡದ ಬದುಕಿನಲ್ಲಿ ಸಿಲುಕಿದ್ದಾರೆ. ನಮಗೆ ನಾವು ಸಮಯವನ್ನು ಮೀಸಲಿಡದಿದ್ದರೆ, ಮುಂದೆ ಆಸ್ಪತ್ರೆಗಳಿಗೆ ಹಣ ವ್ಯಯ ಮಾಡುವ ಕೆಟ್ಟ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಯೋಗ ಜನರ ಬದುಕನ್ನು ಸದೃಢವಾಗಿಸುವಲ್ಲಿ ಅತ್ಯಂತ ಪರಿಣಾಮಕಾರಿ ಪಾತ್ರ ವಹಿಸುತ್ತದೆ. ಪ್ರತಿಯೊಬ್ಬರೂ ಯೋಗ ಹಾಗೂ ಪ್ರಾಣಾಯಾಮದ ಮೊರೆ ಹೋಗಬೇಕು. ಆಗ ಮಾತ್ರವೇ ಆರೋಗ್ಯಕರ ಜೀವನ ಸಾಧ್ಯ ಎಂದು ಪ್ರತಿಪಾದಿಸಿದರು.
ಇಂದು ಹೊರ ಆಹಾರ, ಕೊಬ್ಬಿನಾಂಶದ ಊಟ, ಕರಿದ ಆಹಾರ ಮನುಷ್ಯನ ದೇಹದ ಮೇಲೆ ಹಾಗೂ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಇಂತಹ ಆಹಾರದ ಅಪಾಯಗಳು ತಿಳಿದಿದ್ದರೂ ಯಾರು ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಇವತ್ತು ಕಾಯಿಲೆ ಯಾವ ಕಾರಣದಿಂದ ಬಂದಿದೆ ಎಂಬುದನ್ನು ಕಂಡುಹಿಡಿಯಲಾಗದ ಪರಿಸ್ಥಿತಿ ಬಂದಿರುವುದು ಬೇಸರದ ಸಂಗತಿ ಎಂದು ತಿಳಿಸಿದರು.
ಬೆಂಗಳೂರಿನ ಕ್ಯಾನ್ಸರ್ ಕೇರ್ ಇಂಡಿಯಾ ನ್ಯೂರೋ ಸರ್ಜನ್ ಡಾ.ರಾಜಶೇಖರ ರೆಡ್ಡಿ ಪೊರೆಡ್ಡಿ, ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆಯ ಮಹಾಮೇಧಾನಂದಜೀ ಸ್ವಾಮೀಜಿ, ಎಟಿಎಂ ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ.ಎಲ್.ಬಸವರಾಜ್, ಯೋಗ ಗುರು ರಾಘವೇಂದ್ರ ಪೈ, ವೈಜ್ಞಾನಿಕ ಪ್ರಾಣಾಯಾಮ -ಂಡೇಶನ್ ಟ್ರಸ್ಟ್ ಸಂಸ್ಥಾಪಕರಾದ ಡಾ.ದೇವಕಿ ಮಾಧವ್ ಉಪಸ್ಥಿತರಿದ್ದರು.



