ತಿ.ನರಸೀಪುರ : ಬೈಕ್ ಗೆ ಎದುರಿಗೆ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿಯಾದ ಪರಿಣಾಮ ಯುವಕನೋರ್ವ ಸ್ಥಳದಲ್ಲಿಯೇ ಮೃತಪಟ್ಟಿ ಘಟನೆ ತಾಲೂಕಿನ ಸೋಸಲೆ ಗ್ರಾಮದ ಮುಖ್ಯ ರಸ್ತೆಯಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.
ತಾಲೂಕಿನ ವೀರಪ್ಪ ಓಡೆಯರಹುಂಡಿ ಗ್ರಾಮದ ಶ್ರೀಕಂಠಸ್ವಾಮಿ ಎಂಬುವರ ಪುತ್ರ ಸಿದ್ಧಲಿಂಗಸ್ವಾಮಿ(26) ಮೃತಪಟ್ಟ ಯುವಕ. ಊರಿನಿಂದ ಹೀರೋಹೊಂಡಾ ಸಿ.ಡಿ 100(ಸಿಕೆಎಲ್ 9901) ನಲ್ಲಿ ಚಿಕ್ಕಪ್ಪ ಎಸ್.ಕುಮಾರಸ್ವಾಮಿ ಜೊತೆ ಪಟ್ಟಣಕ್ಕೆ ಬರುತ್ತಿದ್ದಾಗ ಸೋಸಲೆ ಡೇರಿ ಮುಂಭಾಗ ಎದುರಿಗೆ ವೇಗವಾಗಿ ಬಂದ ಲಾರಿ(ಕೆ ಎ 19, ಡಿ 5044) ಡಿಕ್ಕಿ ಹೊಡೆದಿದ್ದರಿಂದ ಈ ದುರ್ಘಟನೆ ನಡೆಯಿತು.
ಇದನ್ನೂ ಓದಿ:-ಕಾಸರಗೋಡು ಸೀಮೆಯಲ್ಲಿ ನಂಜನಗೂಡು ನರಸಣ್ಣ
ತಲೆಗೆ ತೀವ್ರತರದ ಪೆಟ್ಟು ಬಿದ್ದುದ್ದರಿಂದ ಸಿದ್ಧಲಿಂಗಸ್ವಾಮಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡ ಎಸ್.ಕುಮಾರಸ್ವಾಮಿ ಅವರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಘಟನೆ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಮೃತ ದೇಹವನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಈ ಸಂಬಂಧ ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





