ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ ಪುರುಷಾರ್ಥಕ್ಕಾಗಿ ಮಾಡುತ್ತಿದ್ದಾರೋ ಗೊತ್ತಿಲ್ಲ. ಸಾಹಿತ್ಯ ಸಮ್ಮೇಳದಿಂದ ಯಾವುದೇ ಬದಲಾವಣೆ ಆಗಿಲ್ಲ ಎಂದು ಕನ್ನಡಪರ ಹೋರಾಡಗಾರ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ ವರ್ಷವೆಲ್ಲ ಕುಂಭಕರ್ಣನಂತೆ ನಿದ್ದೆ ಮಾಡುತ್ತಿರುತ್ತದೆ. ವರ್ಷದಲ್ಲಿ ಒಂದು ಬಾರಿ ಇಂತಹ ಕನ್ನಡ ಪರ ಸಮ್ಮೇಳನ ನಿಯೋಜನೆಗೊಂಡಾಗ ಮಾತ್ರ ಕೆಲಸ ನಿರ್ವಹಿಸಿ ಪುನಃ ಅದೇ ರೀತಿ ನಿದ್ರೆಗೆ ಜಾರುತ್ತದೆ. ಕನ್ನಡಕ್ಕಾಗಿ ಇವರು ಯಾವತ್ತಾದ್ರೂ ಕೆಲಸ ಮಾಡಿದ್ದಾರಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇತಿಹಾಸ ಗಮನಿಸುತ್ತಾ ಬಂದರೆ ಪ್ರಾದೇಶಿಕ ಭಾಷೆಯ ಬೆಳವಣಿಗೆಗಾಗಿ ಸಾಹಿತ್ಯ ಸಮ್ಮೇಳನ ಪ್ರಾರಂಭ ಮಾಡಿದರು. ಆದರೆ ಈಗ ಅದು ರಾಜಕೀಯ ಹಾಗೂ ಸರ್ಕಾರಿ ಕಾರ್ಯಕ್ರಮ ಆಗುತ್ತಿದೆ. ಇದಕ್ಕೆ ನಮ್ಮ ತಕರಾರು ಏನಿಲ್ಲ ಎಂದು ಪರೋಕ್ಷವಾಗಿ ರಾಜಕೀಯ ಪಕ್ಷಗಳನ್ನು ಟೀಕಿಸಿದರು.
ನೀವು ಈಗ ಸಾಹಿತ್ಯ ಸಮ್ಮೇಳನದ ಖುಷಿಯಲ್ಲಿದ್ದೀರಾ, ಆದರೆ ನಿಜವಾದ ಕನ್ನಡಿಗರು ಕಣ್ಣೀರು ಹಾಕುತ್ತಿದ್ದಾರೆ. ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗುತ್ತಿಲ್ಲ. ಐಟಿ ಬಿಟಿ ಹಾಗೂ ಖಾಸಗಿ ಕಂಪನಿಗಳಿಗೆ ಹೆದರಿ ಸರೋಜಿನಿ ಮಹಿಷಿ ವರದಿ ಜಾರಿ ಮಾಡಲು ಹಿಂದೇಟು ಹಾಕಿದ್ದಿರಿ. ಕನ್ನಡ ಬಾವುಟದ ಬಗ್ಗೆ ಗೊತ್ತಿಲ್ಲದ ಇವರು ಸಾಹಿತ್ಯ ಸಮ್ಮೇಳನ ಮಾಡುತ್ತಿದ್ದಾರೆ. ನಿಮ್ಮ ಸಮ್ಮೇಳನ ನಿಮಗೆ ಇರಲಿ, ನಮ್ಮ ಹೋರಾಟ ನಾವು ಮಾಡುತ್ತೇವೆ ಎಂದು ಹೇಳಿದರು.





