Mysore
25
scattered clouds

Social Media

ಶನಿವಾರ, 16 ಮೇ 2026
Light
Dark

ವನ್ಯಜೀವಿ ಛಾಯಾಗ್ರಹಕರಾಗುವ ಮೊದಲು ಕಾಡಿನ ಭಾಷೆ ಅರಿಯಿರಿ : ಕೃಪಾಕರ್‌ ಸೇನಾನಿ

ಮೈಸೂರು : ವನ್ಯಜೀವಿ ಛಾಯಾಗ್ರಹಣ ಹಾಗೂ ಸಾಕ್ಷ್ಯಚಿತ್ರ ತಯಾರಕರಾಗುವ ಮೊದಲು ಕಾಡಿನ ಭಾಷೆ ಅರಿತುಕೊಂಡಿರಬೇಕು ಎಂದು ವನ್ಯಜೀವಿ ಛಾಯಾಗ್ರಾಹಕರಾದ ಕೃಪಾಕರ್ ಸೇನಾನಿ ತಿಳಿಸಿದರು.

ಮಾನಸಗಂಗೋತ್ರಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಆಯೋಜಿಸಿರುವ ‘ಪತ್ರಿಕೋದ್ಯಮದ ಉದಯೋನ್ಮುಖ ಪ್ರವೃತ್ತಿಗಳು’ ಕುರಿತು ನಡೆದ ೩ನೇ ದಿನದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಕೃಪಾಕರ್ ಸೇನಾನಿ ಅವರು ಮಾತನಾಡಿ, ಪತ್ರಿಕೋದ್ಯಮದ ಅತ್ಯಂತ ಪ್ರಮುಖ ಅಂಶವೆಂದರೆ ಪ್ರಶ್ನೆಗಳನ್ನು ಕೇಳುವುದು. ಅದರಲ್ಲೂ ಸರಿಯಾದ ಪ್ರಶ್ನೆಗಳನ್ನು ಕೇಳುವ ಮೂಲಕವೇ ನೈಜ ಮಾಹಿತಿಯನ್ನು ಹೊರತರಲು ಸಾಧ್ಯ ವನ್ಯಜೀವಿ ಛಾಯಾಗ್ರಹಣ ಹಾಗೂ ಸಾಕ್ಷ್ಯಚಿತ್ರ ತಯಾರಿಸಲು ಹೊರಟವರಿಗೆ ಕಾಡಿನ ಭಾಷೆ ಅರಿತುಕೊಳ್ಳುವುದೇ ಮೊದಲ ಅರ್ಹತೆ ಎಂದರು.

ವನ್ಯಜೀವಿ ಚಿತ್ರೀಕರಣದಲ್ಲಿ ಲೈಟ್, ಲೆನ್ಸ್ ಸೇರಿದಂತೆ ಅಗತ್ಯಉಪಕರಣಗಳ ಬಳಕೆ ಅಗತ್ಯ, ಅವುಗಳನ್ನು ಸಂದರ್ಭಕ್ಕೆ ತಕ್ಕಂತೆ ಬಳಸುವುದು ಹಾಗೂ ಅಭಿವೃದ್ಧಿ ಪಡಿಸಲಾದ ಉಪಕರಣಗಳ ಬಗ್ಗೆ ಮಾಹಿತಿ ಹೊಂದಿರಬೇಕು. ನಾವೂ ಕಾಲಕ್ಕೆ ತಕ್ಕಂತೆ ಹೊಂದಿಕೊಂಡು ಉನ್ನತ ತಂತ್ರಾಂಶಗಳನ್ನು ಅಳವಡಿಸಿಕೊಂಡು ಉತ್ತಮ ಸಾಕ್ಷ್ಯಾಚಿತ್ರಗಳನ್ನು ನಿರ್ಮಿಸಬೇಕು ಎಂದು ಸಲಹೆ ನೀಡಿದರು.

ಒಬ್ಬ ವನ್ಯಜೀವಿ ಚಿತ್ರನಿರ್ಮಾಪಕ ಎಲ್ಲಕ್ಕಿಂತ ಮೊದಲು ಕಾಡಿನ ಮೌನವನ್ನು ಆಲಿಸಬೇಕು. ನಂತರ ಆ ಮೌನಭಾಷೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು. ಇದು ಚಿತ್ರೀಕರಣಕ್ಕೆ ಪೂರಕವಾದ ವಾತಾವರಣವನ್ನು ಕಲ್ಪಿಸಿಕೊಡುತ್ತದೆ ಎಂದು ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಬಳಿಕ ‘ವೈಲ್ಡ್‌ಲೈಫ್ ಡಾಕ್ಯುಮೆಂಟರಿ ಮೇಕಿಂಗ್’ ವಿಷಯ ಕುರಿತು ಕಾರ್ಯಾಗಾರ ನಡೆಸಿಕೊಟ್ಟರು.

ಕಾರ್ಯಾಗಾರದಲ್ಲಿ ಮಾಧ್ಯಮ ವರದಿಗಾರ ರವಿ ಪಾಂಡವಪುರ, ದೂರದರ್ಶನದಲ್ಲಿ ಸ್ಕ್ರಿಪ್ಟ್ ಬರವಣಿಗೆ, ತಂತ್ರಾಂಶ ಬಳಕೆ, ವಿಶೇಷ ವರದಿ, ಗ್ರೌಂಡ್ ರಿಪೋರ್ಟ್, ವಿಷಯಗಳ ಗೌಪ್ಯತೆ, ಎದುರಾಗಬಹುದಾದ ಸವಾಲುಗಳ ನಿವಾರಣೆ ಇನ್ನಿತರ ವಿಚಾರಗಳ ಬಗ್ಗೆ ವಿವರಿಸಿದರು.

ವಿಭಾಗದ ಮುಖ್ಯಸ್ಥೆ ಪ್ರೊ.ಮಮತ, ಪ್ರಾಧ್ಯಾಪಕರಾದ ಪ್ರೊ.ನಿರಂಜನ, ಪ್ರೊ.ಸಿ.ಕೆ.ಪುಟ್ಟಸ್ವಾಮಿ, ಅತಿಥಿ ಉಪನ್ಯಾಸಕರಾದ ಡಾ.ಕುಮಾರ ಸ್ವಾಮಿ, ಡಾ.ಬಿ.ಸಿ.ಸಂಜಯ್, ಸಂಶೋಧಕರು, ವಿದ್ಯಾರ್ಥಿಗಳು ಹಾಗೂ ವಿಭಾಗದ ಬೋಧಕೇತರ ಸಿಬ್ಬಂದಿ ಹಾಜರಿದ್ದರು.

Tags:
error: Content is protected !!