ಮೈಸೂರು: ಹುಲಿ ದಾಳಿಗೆ ಹಸುವೊಂದು ಸಾವನ್ನಪ್ಪಿರುವ ಆತಂಕಕ್ಕಾರಿ ಘಟನೆ ಜಿಲ್ಲೆಯ ಹುಣಸೂರು ತಾಲ್ಲೂಕಿನ ಹೆಬ್ಬನಕುಪ್ಪೆ ಗ್ರಾಮದಲ್ಲಿ ನಡೆದಿದೆ.
ಕಳೆದ ಕೆಲ ದಿನಗಳಿಂದ ಈ ಭಾಗದಲ್ಲಿ ಹುಲಿಯೊಂದು ಉಪಟಳ ನೀಡುತ್ತಿದ್ದು, ರೈತರು ಸಾಕಿರುವ ಹಸುಗಳು, ಕುರಿ, ಮೇಕೆಗಳನ್ನು ತಿಂದು ತೇಗುತ್ತಿದೆ.
ಕೆ.ಜೆ.ಹಬ್ಬನಕುಪ್ಪೆಯಲ್ಲಿ ಹುಲಿ ದಾಳಿಗೆ ಹಸು ಸಾವನ್ನಪ್ಪಿದ್ದು, ಪಕ್ಕದಲ್ಲೇ ಇರುವ ಗೌರಿಪುರ ಎಂಬ ಗ್ರಾಮದಲ್ಲಿ ಮತ್ತೊಂದು ಹಸುವಿಗೆ ಗಂಭೀರ ಗಾಯಗಳಾಗಿದೆ.
ನಾಗರಹೊಳೆ ಉದ್ಯಾನದ ಬಳಿಯ ನಂಜಾಪುರ ಗ್ರಾಮದ ಮೊರಾರ್ಜಿ ವಸತಿ ಶಾಲೆಯ ಪಕ್ಕದ ಕುರುಚಲು ಅರಣ್ಯ ಪ್ರದೇಶದಲ್ಲೂ ಹುಲಿ ಹಸುವಿನ ಮೇಲೆ ದಾಳಿ ಮಾಡಿದ್ದು, ಹಸು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದೆ.
ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಆದರೆ ಈ ಭಾಗದಲ್ಲಿ ಹುಲಿ ದಾಳಿಯಿಂದ ಗ್ರಾಮಸ್ಥರು ತೀವ್ರ ಆತಂಕಕ್ಕೀಡಾಗಿದ್ದು, ಜಮೀನುಗಳಿಗೆ ತೆರಳಲು ಭಯಪಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹುಲಿಯನ್ನು ಸೆರೆಹಿಡಿಯಲು ಬೋನು ಅಳವಡಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.





