Mysore
21
clear sky

Social Media

ಭಾನುವಾರ, 15 ಮಾರ್ಚ್ 2026
Light
Dark

ಚಾಮುಂಡಿಬೆಟ್ಟಕ್ಕೆ ವಿಐಪಿಗಳ ಸಂಖ್ಯೆ ಹೆಚ್ಚಳ : ಧರ್ಮದರ್ಶನಕ್ಕೆ ತೊಡಕು

Increase in number of VIPs visiting Chamundi Hills hindrance to religious pilgrimage

ಮೈಸೂರು : ಮೂರನೇ ಆಷಾಢ ಶುಕ್ರವಾರ ಚಾಮುಂಡಿ ಬೆಟ್ಟದಲ್ಲಿ ವಿಐಪಿಗಳ ಹಾವಳಿ ಹೆಚ್ಚಾಗಿತ್ತು. ನಾವು ಸಚಿವರು, ಶಾಸಕರ ಕಡೆಯವರೆಂದು ಹೇಳಿಕೊಂಡು ಶಿಫಾರಸ್ಸು ಪತ್ರ ತಂದವರೇ ಹೆಚ್ಚಾಗಿದ್ದರು. ಇದರಿಂದ ವಿಐಪಿಗಳ ಸರತಿ ಸಾಲು ಮಾರುದ್ದ ಇತ್ತು.

ದೇವಾಲಯದ ಗರ್ಭಗುಡಿಗೆ ತೆರಳಲೂ ಸರತಿ ಸಾಲಿನಲ್ಲಿ ನಿಂತಿದ್ದರು. ಇದರಿಂದ ಧರ್ಮ ದರ್ಶನಕ್ಕೆ ಮಂಜಾನೆಯಿಂದಲೇ ಸರತಿ ಸಾಲಿನಲ್ಲಿ ಬಂದಿದ್ದವರಿಗೆ ಸಮಸ್ಯೆಯಾಯಿತು. ಭಕ್ತರೊಂದಿಗೆ ವಿಐಪಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಜಿಲ್ಲಾಡಳಿತ ಈ ಬಾರಿ ಯಾವುದೇ ಶಿಫಾರಸ್ಸು ಪತ್ರಕ್ಕೆ ಅವಕಾಶ ಇಲ್ಲವೆಂದು ಹೇಳಿತ್ತು.

ಆದರೆ, ಹೇಳಿದ್ದೇ ಒಂದು ಮಾಡಿದ್ದೇ ಒಂದು ಎಂಬಂತಿತ್ತು ಬೆಟ್ಟದಲ್ಲಿನ ಪರಿಸ್ಥಿತಿ. ಧರ್ಮದರ್ಶನದಲ್ಲಿ ದರ್ಶನಕ್ಕೆ ನಿಂತಿದ್ದ ಮಹಿಳೆಯರು ವಿವಿಐಪಿಗಳನ್ನು ಒಳಗೆ ಕಳುಹಿಸುತ್ತಿದ್ದಕ್ಕೆ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಡಳಿತ ಹಾಗೂ ಪೊಲೀಸ್‌ ಸಿಬ್ಬಂದಿ ವಿರುದ್ಧ ಕಿಡಿಕಾರಿದರು.

ಗೃಹ ಸಚಿವ ಡಾ.ಜಿ.ಪರಮೇಶ್ವರ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಚಿತ್ರ ನಟ ಶಶಿಕುಮಾರ್‌, ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌, ಗ್ಯಾರಂಟಿ ಯೋಜನೆ ಉಪಧ್ಯಾಕ್ಷ ಹೆಚ್.ಎಂ ರೇವಣ್ಣ, ಸಂಸದ ರಾಘವೇಂದ್ರ, ಬಿಜೆಪಿ ಶಾಸಕ ಶ್ರೀವತ್ಸ, ಜೆಡಿಎಸ್‌ ಶಾಸಕ ಎ.ಮಂಜು ಸೇರಿದಂತೆ ಅನೇಕ ವಿಐಪಿಗಳು ಕುಟುಂಬ ಸಮೇತ ದರ್ಶನ ಪಡೆದರು.

ಮೂರನೇ ಆಷಾಢಮಾಸದ ಶುಕ್ರವಾರದಂದು ಚಾಮುಂಡೇಶ್ವರಿ ಬಿಳಿ, ನೇರಳೆ ಬಣ್ಣದ ಸೀರೆಯುಟ್ಟು ವಿಶೇಷ ಗಜಲಕ್ಷ್ಮಿ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದಳು.

Tags:
error: Content is protected !!