Mysore
23
overcast clouds

Social Media

ಶನಿವಾರ, 04 ಏಪ್ರಿಲ 2026
Light
Dark

ನಂಜನಗೂಡು| ಅಕ್ರಮ ಮದ್ಯ ಮಾರಾಟ: ವ್ಯಕ್ತಿ ಸಾವು

ಶ್ರೀಧರ್ ಆರ್. ಭಟ್

ನಂಜನಗೂಡು: ಯುಗಾದಿ ಹಬ್ಬದ ದಿನ ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ ಮದ್ಯ ಸೇವಿಸಿ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ನಂಜನಗೂಡು ತಾಲ್ಲೂಕಿನ ಬಂಡೀಪುರ ರಕ್ಷಿತಾರಣ್ಯದ ಅಂಚಿನಲ್ಲಿರುವ ನಾಗಣಾಪುರ ಕಾಲೋನಿಯಲ್ಲಿ ನಡೆದಿದೆ.

ನಾಗಣಾಪುರ ಆದಿವಾಸಿ ಕಾಲೋನಿಯ 54 ವರ್ಷದ ರಾಜು ಎಂಬಾತನೇ ಅಕ್ರಮ ಮದ್ಯ ಸೇವಿಸಿ ಸಾವನ್ನಪ್ಪಿರುವ ದುರ್ದೈವಿಯಾಗಿದ್ದಾನೆ. ತಾಲ್ಲೂಕಿನಾದ್ಯಂತ ಪೆಟ್ಟಿ ಮತ್ತು ಗಿರಣಿ ಅಂಗಡಿಗಳಲ್ಲಿ ಅನಧಿಕೃತವಾಗಿ ಮಾರಾಟವಾಗುವ ಮದ್ಯ ಸೇವಿಸಿ ಬಲಿಯಾದ ಮೂರನೆಯ ವ್ಯಕ್ತಿ ಈತನಾಗಿದ್ದಾನೆ.

ಕಳೆದ 20 ದಿನಗಳ ಹಿಂದೆ ಇದೇ ಕಾಡಂಚಿನ ಕಾಲೋನಿಯ ಈರೇಗೌಡನ ಹುಂಡಿ ಗ್ರಾಮದ ಚೆನ್ನಪ್ಪ ಹಾಗೂ ಬಳ್ಳೂರು ಹುಂಡಿ ಗ್ರಾಮದ ಮಹದೇವ ಎಂಬುವವರು ಅಕ್ರಮ ಮದ್ಯ ಸೇವಿಸಿ ಬಲಿಯಾಗಿದ್ದರು. ಈ ಘಟನೆ ಮಾಸುವ ಮುನ್ನವೇ ಈಗ ಮೂರನೇ ಬಲಿಯಾಗಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಜನಪ್ರತಿನಿಧಿಗಳು ಮತ್ತು ಅಬಕಾರಿ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಗ್ರಾಮೀಣ ಪ್ರದೇಶದ ಪೆಟ್ಟಿ ಮತ್ತು ಗಿರಣಿ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದ್ದು, ಈ ಬಗ್ಗೆ ಏನೂ ಕ್ರಮ ಕೈಗೊಳ್ಳದೇ ಅಧಿಕಾರಿಗಳು ಜಾಣ ಮೌನ ವಹಿಸಿರುವುದು ಅನೇಕ ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.

Tags:
error: Content is protected !!