ಮೈಸೂರು : ಕ್ರಾಂತಿ ಎಂದರೇನು? ಬದಲಾವಣೆ ಕ್ರಾಂತಿ ಅಲ್ಲ ಎಂದು ನವೆಂಬರ್ ಕ್ರಾಂತಿ ಬಗ್ಗೆ ಪ್ರಶ್ನಿಸಿದ ಮಾಧ್ಯಮದವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಯಾರು ಈ ಬಗ್ಗೆ ಹೇಳಿದರೂ ಮಾಧ್ಯಮದವರು ನಿರ್ಲಕ್ಷಿಸಬೇಕು ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್.ಎಸ್.ಎಸ್ ಸೇರಿದಂತೆ ಇತರೆ ಸಂಘ ಸಂಸ್ಥೆಗಳ ಚಟುವಟಿಕೆಗಳಿಗೆ ನಿರ್ಬಂಧ ಶಾಲಾ ಆವರಣದಲ್ಲಿ ಸಂಘ ಸಂಸ್ಥೆಗಳ ಚಟುವಟಿಕೆಗಳಿಗೆ ನಿರ್ಬಂಧ ಹೇರುವ ಬಗ್ಗೆ 2013 ರಲ್ಲಿ ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಗಳಿದ್ದ ಸಂದರ್ಭದಲ್ಲಿ ಸರ್ಕಾರಿ ಆದೇಶ ಹೊರಡಿಸಿರುವ ಬಗ್ಗೆ ಮಾತನಾಡಿ ಕೇವಲ ಆರ್.ಎಸ್.ಎಸ್ ಚಟುವಟಿಕೆಗಳಿಗೆ ಮಾತ್ರವಲ್ಲ ಎಲ್ಲಾ ಸಂಘ ಸಂಸ್ಥೆಗಳ ಚಟುವಟಿಕೆಗಳ ಮೇಲೂ ಸರ್ಕಾರಿ ಆದೇಶ ಅನ್ವಯವಾಗುತ್ತದೆ. ಸರ್ಕಾರಿ ಶಾಲೆ, ಆಟದ ಮೈದಾನ, ಸರ್ಕಾರಿ ಸ್ಥಳಗಳು, ಉದ್ಯಾನವನಗಳಲ್ಲಿ , ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದೆ ಎಂದರು.
ಇದನ್ನು ಓದಿ: ರಾಜ್ಯದಲ್ಲಿ ನವೆಂಬರ್ ಕ್ರಾಂತಿ ಆಗೋದು ಪಕ್ಕಾ: ಆರ್.ಅಶೋಕ್ ಪುನರುಚ್ಛಾರ
ನಾರಾಯಣಮೂರ್ತಿ ಅವರು ಇದು ಹಿಂದುಳಿದವರ ಸಮೀಕ್ಷೆ ಎಂದು ಭಾವಿಸಿದ್ದರೆ, ಅದು ತಪ್ಪು
ಇನ್ಫೋಸಿಸ್ ಸಂಸ್ಥೆಯ ಮುಖ್ಯಸ್ಥರಾದ ಸುಧಾ ಮೂರ್ತಿ ಹಾಗೂ ನಾರಾಯಣಮೂರ್ತಿ ಅವರು ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಗೆ ಮಾಹಿತಿ ನೀಡುವುದಿಲ್ಲ, ನಾವು ಹಿಂದುಳಿದ ಜಾತಿಯವರಲ್ಲ ಎಂದು ದೃಢೀಕರಣ ಪತ್ರ ನೀಡಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಸಮೀಕ್ಷೆ ಹಿಂದುಳಿದವರಿಗಲ್ಲಾ ಎಂದು ಅರ್ಥ ಮಾಡಿಕೊಳ್ಳಬೇಕು. ಇನ್ಫೋಸಿಸ್ ಸಂಸ್ಥೆಯವರು ಅಂದರೆ ಅವರು ಬೃಹಸ್ಪತಿಗಳೇ? ಸರ್ಕಾರ ಮಾಡುತ್ತಿರುವುದು ಹಿಂದುಳಿದವರ ಸಮೀಕ್ಷೆಯಲ್ಲ ಎಂದು ಈಗಾಗಲೇ ಹೇಳಿದೆ. ಇದು ಎಲ್ಲಾ ಜನಸಂಖ್ಯೆಯನ್ನು ಒಳಗೊಂಡಂತೆ ಮಾಡುತ್ತಿರುವ ಸಮೀಕ್ಷೆ. ಶಕ್ತಿ ಯೋಜನೆಯಡಿ ಬಡವರು , ಮೇಲ್ಜಾತಿಯವರು ಎಲ್ಲರೂ ಬಳಸಿಕೊಳ್ಳುತ್ತಾರೆ. ಈ ಬಗ್ಗೆ ತಪ್ಪು ಮಾಹಿತಿ ಹೋಗಿದೆ. ಸರ್ಕಾರ ಈ ಬಗ್ಗೆ ಜಾಹೀರಾತು, ಸಚಿವರು ಹಾಗೂ ಮುಖ್ಯಮಂತ್ರಿಗಳ ಸಂದೇಶಗಳನ್ನು ಜನರಿಗೆ ತಲುಪಿಸಿದೆ ಎಂದರು.
ರಾಜ್ಯದ ಏಳು ಕೋಟಿ ಜನರ ಸಮೀಕ್ಷೆ
ಸಮೀಕ್ಷೆಯನ್ನು ಹಿಂದುಳಿದವರ ಸಮೀಕ್ಷೆಯೆಂದು ಭಾವಿಸುವುದು ತಪ್ಪು. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರವೂ ಜಾತಿಗಣತಿಯನ್ನು ಮಾಡುತ್ತದೆ, ಆಗಲೂ ಇವರು ಸಹಕರಿಸುವುದಿಲ್ಲವೇ? ಅವರಿಗಿರುವ ತಪ್ಪು ಮಾಹಿತಿಯಿಂದಾಗಿ ಈ ರೀತಿ ಅಸಹಕಾರ ತೋರುತ್ತಿರಬಹುದು. ರಾಜ್ಯದಲ್ಲಿ ಸುಮಾರು 7 ಕೋಟಿ ಜನಸಂಖ್ಯೆಯಿದ್ದು, ಈ ಜನರ ಆರ್ಥೀಕ, ಶೈಕ್ಷಣಿಕ ಹಾಗೂ ಸಾಮಾಜಿಕ ಸಮೀಕ್ಷೆಯಾಗಿದೆ ಎಂದರು.
ಸರ್ಕಾರದ ವಿರುದ್ಧ ಉದ್ದೇಶಪೂರ್ವಕ ಆರೋಪ
ಗುತ್ತಿಗೆದಾರರ ಸಂಘದ ಅಧ್ಯಕ್ಷರು ಕಾಂಗ್ರೆಸ್ ಸರ್ಕಾರದಲ್ಲಿಯೂ ಕಮೀಷನ್ ದಂಧೆ ನಡೆಯುತ್ತಿದೆ ಎಂದು ಆರೋಪಿಸಿರುವ ಬಗ್ಗೆ ಉತ್ತರಿಸುತ್ತಾ, ಆರೋಪ ಮಾಡುತ್ತಿರುವವರು ನ್ಯಾಯಾಲಯದ ಮೊರೆ ಹೋಗಲಿ. ಸರ್ಕಾರದ ವಿರುದ್ಧ ಉದ್ದೇಶಪೂರ್ವಕವಾಗಿ ಆರೋಪಿಸಲಾಗುತ್ತಿದೆ ಎಂದರು.





