ಎಚ್.ಡಿ.ಕೋಟೆ : ಪಟ್ಟಣ ವ್ಯಾಪ್ತಿಯಲ್ಲಿರುವ ಹಲವು ಪ್ರಮುಖ ದೇವಸ್ಥಾನಗಳಲ್ಲಿ ಸರಣಿ ಕಳ್ಳತನ ನಡೆದು ಹುಂಡಿಯಲ್ಲಿದ್ದ ಲಕ್ಷಾಂತರ ರೂ.ಗಳನ್ನು ಕಳ್ಳರು ದೋಚಿರುವ ಘಟನೆ ನಡೆದಿದೆ.
ಕಾಳಿದಾಸ ರಸ್ತೆಯಲ್ಲಿರುವ ಶತಮಾನಗಳ ಇತಿಹಾಸ ಹೊಂದಿರುವ ಶ್ರೀ ಶನೈಶ್ಚರ ದೇವಾಲಯದಲ್ಲಿ ಮತ್ತು ಮೇಟಿಕುಪ್ಪೆ ಮುಖ್ಯರಸ್ತೆಯ ಹನುಮಂತ ನಗರದಲ್ಲಿರುವ ಆಂಜನೇಯಸ್ವಾಮಿ ದೇವಾಲಯ, ಕೃಷ್ಣಾಪುರ ಗ್ರಾಮದ ಪೌರಕಾರ್ಮಿಕರ ಕಾಲೋನಿಯಲ್ಲಿರುವ ಪಟ್ಟಲದಮ್ಮ ದೇವಸ್ಥಾನಗಳಲ್ಲಿ ಕಳ್ಳರು ಶುಕ್ರವಾರ ರಾತ್ರಿ ಬಾಗಿಲು ಮುರಿದು ದೇವಸ್ಥಾನದಲ್ಲಿದ್ದ ಹುಂಡಿಯನ್ನು ಒಡೆದು ಹಣ ಮತ್ತು ಚಿನ್ನಾಭರಣಗಳನ್ನು ದೋಚಿದ್ದಾರೆ.
ಇತ್ತೀಚೆಗೆ ಈ ದೇಗುಲಗಳಲ್ಲಿ ಅನೇಕ ವಿಶೇಷ ಕಾರ್ಯಕ್ರಮಗಳು ನಡೆದಿದ್ದವು. ಇದರಿಂದ ಭಕ್ತಾದಿಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ಹಣವನ್ನು ಹುಂಡಿಯಲ್ಲಿ ಹಾಕಿದ್ದರು. ಇದನ್ನು ಗಮನಿಸಿಕೊಂಡಿದ್ದ ಕಳ್ಳರ ಗುಂಪು ಕಳ್ಳತನದ ಕೃತ್ಯ ಎಸಗಿದೆ.
ಪುರಸಭೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ಅಂಗಡಿಗಳ ಬೀಗ ಒಡೆದು ಕಳ್ಳತನ ನಡೆಸುತ್ತಿದ್ದ ಕಳ್ಳರು ಈಗ ದೇವಾಲಯಗಳಿಗೆ ಕನ್ನ ಹಾಕುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಸರಣಿ ಕಳ್ಳತನದ ದೇವಸ್ಥಾನಗಳಿಗೆ ಪಟ್ಟಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.





