ಮೈಸೂರು : ಗುರು ಪೂರ್ಣಿಮೆ ಅಂಗವಾಗಿ ನಗರದಾದ್ಯಂತ ವಿವಿಧ ದೇವಾಲಯಗಳಲ್ಲಿ ವಿಶೇಷ ಧಾರ್ಮಿಕ ಕಾರ್ಯಗಳು ನಡೆದವು. ಈ ಕಾರ್ಯಕ್ಕೆ ಸಾವಿರಾರು ಮಂದಿ ಸಾಕ್ಷಿಯಾದರು.
ನಗರದ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಗುರು ರಾಘವೇಂದ್ರ ದೇವಾಲಯ, ಕೃಷ್ಣಮೂರ್ತಿ ಪುರಂ, ಕುವೆಂಪುನಗರ, ಜಯಲಕ್ಷಿ ಪುರಂ, ಉತ್ತನಹಳ್ಳಿ ಸೇರಿದಂತೆ ನಗರದ ವಿವಿದೆಡೆ ಇರುವ ರಾಘವೇಂದ್ರ ಸ್ವಾಮಿ ದೇವಾಲಯಗಳಲ್ಲಿ ಗುರುವಾರ ಬೆಳಿಗ್ಗೆಯಿಂದಲೇ ವಿಶೇಷ ಪೂಜಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು.
ಗುರುವಾರ ಬೆಳಗಿನ ಜಾವದಿಂದಲೇ ದೇವಾಲಯಗಳಲ್ಲಿ ಧಾರ್ಮಿಕ ಕಾರ್ಯಗಳು ಆರಂಭವಾದವು, ಕಳಸ ಪೂಜೆ, ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ ಸೇರಿದಂತೆ ವಿವಿಧ ಪೂಜೆಗಳನ್ನು ನಡೆಸಲಾಯಿತು. ಮದ್ಯಾಹ್ನ ಸಾವಿರಾರು ಮಮದಿಗೆ ಪ್ರಸಾದ ವಿನಿಯೋಗಿಸಲಾಯಿತು. ವಿವಿಧ ದೇವಾಲಯಗಳಲ್ಲಿ ಸಂಜೆ ಸಂಗೀತ ಹಾಗೂ ಭಕ್ತಿ ಗೀತೆಗಳ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಇನ್ನು ನಗರದ ತ್ಯಾಗರಾಜ ರಸ್ತೆ, ರಾಮಾನುಜ ರಸ್ತೆ, ರಾಮಕೃಷ್ಣನಗರ ಸೇರಿದಂತೆ ನಗರದ ವಿವಿದೆಡೆ ಶಿರಢಿ ಸಾಯಿಬಾಬ ದೇವಾಲಯಗಳಲ್ಲಿ ಕೂಡ ಗುರುವಾರ ಬೆಳಿಗ್ಗೆಯಿಂದಲೇ ಕಾಕಡಾರತಿ ಸೇರಿದಂತೆ ವಿವಿಧ ಪೂಜಾ ವಿಧಿವಿಧಾನಗಳನ್ನು ನಡೆಸಲಾಯಿತು. ಅಲ್ಲಿಯೂ ಕೂಡ ಸಾವಿರಾರು ಮಂದಿಗೆ ಮದ್ಯಾಹ್ನ ಹಾಗೂ ಸಂಜೆ ಪ್ರಸಾದ ವಿತರಿಸಲಾಯಿತು.
ಗುರು ಪೂರ್ಣಿಮೆಯ ಮಹತ್ವ: ಗುರು ಪೂರ್ಣಿಮಾದ ಶುಭ ದಿನವನ್ನು ಆಷಾಢ ಪೂರ್ಣಿಮಾವೆಂದೂ ಕರೆಯುತ್ತಾರೆ. ಇದು ಆಷಾಢ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಾಗಿದೆ. ಈ ಶುಭ ದಿನದಂದು ನಾವು ನಮ್ಮ ಹಿರಿಯರಿಗೆ, ಗುರುಗಳಿಗೆ ಗೌರವವನ್ನು, ಕೃತಜ್ಞತೆಯನ್ನು ಸಲ್ಲಿಸುತ್ತೇವೆ.
ಬುದ್ದರು ಧರ್ಮೋಪದೇಶ ನೀಡಿದ ದಿನ:- ಬೌದ್ಧ ಧರ್ಮದ ಸ್ಥಾಪಕ ಗೌತಮ ಬುದ್ಧನು ಜ್ಞಾನೋದಯವನ್ನು ಪಡೆದ ನಂತರ ಸಾರನಾಥದಲ್ಲಿ ತನ್ನ ಮೊದಲ ಧರ್ಮೋಪದೇಶವನ್ನು ನೀಡಿದ ಕಾರಣ ಬೌದ್ಧ ಧರ್ಮದ ಅನುಯಾಯಿಗಳಿಗೆ ಗುರು ಪೂರ್ಣಿಮಾ ಪ್ರಮುಖ ದಿನವಾಗಿದೆ. ಬೌದ್ಧರು ಗೌತಮ ಬುದ್ಧನಿಗೆ ಗೌರವ ಸಲ್ಲಿಸಲು ಗುರು ಪೂರ್ಣಿಮೆಯನ್ನು ಆಚರಿಸುತ್ತಾರೆ.
ಈ ಕಾರಣಕ್ಕಾಗಿ ಹಿಂದೂ ಧರ್ಮದಲ್ಲಿ ಗುರು ಪೂರ್ಣಿಮಾಕ್ಕೆ ವಿಶೇಷ ಮಹತ್ವವನ್ನು ನೀಡಲಾಗಿದೆ. ಈ ದಿನ ಮಹರ್ಷಿ ವ್ಯಾಸರು ಜನಿಸಿದ್ದರು ಎನ್ನುವ ಕಾರಣಕ್ಕಾಗಿ ಇದನ್ನು ವ್ಯಾಸ ಪೂರ್ಣಿಮಾವೆಂದೂ ಕರೆಯಲಾಗುತ್ತದೆ. ವ್ಯಾಸರು ಹಿಂದೂ ಧರ್ಮಕ್ಕೆ ಸಂಬಂಧಿಸಿದ ಶ್ರೇಷ್ಠ ಮಹಾಕಾವ್ಯಗಳಲ್ಲಿ ಒಂದಾದ ಮಹಾಭಾರತವನ್ನು ರಚಿಸಿದವರು.
ದೇಶದ ನಾನಾ ಭಾಗಗಳಲ್ಲಿ ಜನರು ಗುರುಗಳನ್ನು ಸ್ಮರಿಸುತ್ತಾ ಗುರು ಪೂರ್ಣಿಮಾವನ್ನು ಸಂಭ್ರಮಿಸುತ್ತಾರೆ. ಈ ದಿನದಂದು ಗುರುವಿನ ಆಶೀರ್ವಾದವನ್ನು ಕೋರುತ್ತಾ ಶುಭಾಶಯಗಳನ್ನು ಪರಸ್ಪರ ಹಂಚಿಕೊಳ್ಳುತ್ತಾರೆ.





