ಹುಣಸೂರು : ಗಿರವಿ ಅಂಗಡಿಯಲ್ಲಿ ಸ್ನೇಹಿತರ ಹೆಸರುಗಳಲ್ಲಿ ನಕಲಿ ಚಿನ್ನದ ಉಂಗುರಗಳನ್ನು ಅಡವಿಟ್ಟು ಪಂಗನಾಮ ಹಾಕಿ ಲಕ್ಷಾಂತರ ರೂ. ಮೋಸ ಮಾಡಿದ್ದ ಆರೋಪಿಯನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಚಿಕ್ಕನಾಯಕನಹಳ್ಳಿಯ ಮಂಜುನಾಥ ಅಲಿಯಾಸ್ ಮಹೇಶ್ ಬಂಧಿತ ಆರೋಪಿ. ಮತ್ತಿಬ್ಬರು ಕಾರಿನೊಂದಿಗೆ ಪರಾರಿಯಾಗಿದ್ದಾರೆ.
ಈತ ತಾಲ್ಲೂಕಿನ ಗಾವಡಗೆರೆ ಗ್ರಾಮದ ಕಾವೇರಿ ಜ್ಯುವೆಲ್ಲರ್ಸ್ ಚಿನ್ನ, ಬೆಳ್ಳಿ ಗಿರವಿ ಅಂಗಡಿಯಲ್ಲಿ ೨೦೨೩ರ ನವೆಂಬರ್ ೨೪ರಿಂದ ೨೦೨೫ ಜು.೫ರವರೆಗೆ ಕೆಡಿಎಂ ೯೧೬ ಮಾರ್ಕ್ ಇರುವ ೧೧ ನಕಲಿ ಉಂಗುರಗಳನ್ನು ಗಿರವಿ ಇಟ್ಟು ಸುಮಾರು ೫ ಲಕ್ಷ ರೂ. ಸಾಲ ಪಡೆದಿದ್ದ.
ಪ್ರಕರಣದ ವಿವರ:
ಮಂಜುನಾಥ ಪದೇಪದೇ ಸ್ನೇಹಿತರೊಂದಿಗೆ ಬಂದು ಬೇರೆ ಬೇರೆ ಹೆಸರುಗಳಲ್ಲಿ ಉಂಗುರಗಳನ್ನು ಗಿರವಿ ಇಡುತ್ತಿರುವುದರಿಂದ ಅನುಮಾನಗೊಂಡ ಅಂಗಡಿ ಮಾಲಿಕ ಜೆಸಿಂಗ್ ಉಂಗುರಗಳನ್ನು ಪರೀಕ್ಷಿಸಿದ ವೇಳೆ ನಕಲಿ ಚಿನ್ನ ಎಂಬುದು ತಿಳಿದು ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.
ಶನಿವಾರ ಆರೋಪಿ ಮಂಜುನಾಥ್ ಕಾರಿನಲ್ಲಿ ತನ್ನಿಬ್ಬರು ಸ್ನೇಹಿತರೊಂದಿಗೆ ಬಂದು ಉಂಗುರ ಗಿರವಿ ಇಡಲು ಮುಂದಾದ ವೇಳೆ ಗಿರವಿ ಅಂಗಡಿ ಮಾಲಿಕ ಜೆಸಿಂಗ್ ಅಕ್ಕಪಕ್ಕದವರಿಗೆ ಮಾಹಿತಿ ನೀಡಿ ಪೊಲೀಸರಿಗೆ ತಿಳಿಸಿದ್ದಾರೆ. ಈ ವೇಳೆ ಮಂಜುನಾಥ್ ಸಿಕ್ಕಿ ಬಿದ್ದಿದ್ದು, ಕಾರಿನಲ್ಲಿದ್ದ ಇಬ್ಬರು ಪರಾರಿಯಾಗಿದ್ದಾರೆ.
ಎಸ್ಪಿ ವಿಷ್ಣುವರ್ಧನ್, ಡಿವೈಎಸ್ಪಿ ಗೋಪಾಕೃಷ್ಣರವರ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಎನ್.ಮುನಿಯಪ್ಪ, ಉಪನಿರೀಕ್ಷಕರಾದ ರಾಮು, ಶ್ರೀನಿವಾಸಲು, ಎಎಸ್ಐ ಅಂತೋಣಿಕ್ರೂಸ್, ಸಿಬ್ಬಂದಿಗಳಾದ ವಿಜಯರಾಘು, ಇಮ್ರಾನ್ಷರೀಫ್, ಮಹದೇವ, ರಮೇಶ, ಮಂಜುನಾಥ, ಚಾಲಕ ಸುಂದರ್ರಾಜು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.





