ಮೈಸೂರು: ಎಲ್ಲ ಶಿಬಿರಾರ್ಥಿಗಳು ಸುಗಮ ಸಂಗೀತದ ಪ್ರಕಾರದ ಕಾರ್ಯವನ್ನು ಕವಿಗಳ ಕಾವ್ಯದ ಗೀತೆಗಳನ್ನು ಕಲಿಯುವುದರ ಮೂಲಕ ಸಂಗೀತಕ್ಕಿರುವ ಶಕ್ತಿಯನ್ನು ಮನಗಾಣಬೇಕು ಎಂದು ಗಾಯಕ ಡಾ.ಕಿಕ್ಕೇರಿ ಕೃಷ್ಣಮೂರ್ತಿ ತಿಳಿಸಿದರು.
ನಗರದ ಹೂಟಗಳ್ಳಿಯಲ್ಲಿರುವ ಶ್ರೀ ಅನಂತೇಶ್ವರ ಭವನದಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್ ಮೈಸೂರು ಜಿಲ್ಲಾ ಘಟಕದಿಂದ ಆಯೋಜಿಸಿರುವ ಎರಡು ದಿನಗಳ ಸುಗಮ ಸಂಗೀತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸುಗಮ ಸಂಗೀತವು ಸಂಗೀತ ಪ್ರಕಾರಗಳಲ್ಲಿ ಅತಿ ದೊಡ್ಡದು ಎಂದರು.
ಪರಿಷತ್ತಿನ ಮೈಸೂರು ಘಟಕದ ಜಿಲ್ಲಾಧ್ಯಕ್ಷ ಡಾ.ನಾಗರಾಜ್ ವಿ.ಬೈರಿ ಮಾತನಾಡಿ, ಮೈಸೂರಿನಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಪ್ರತಿವರ್ಷ ಸಂಗೀತ ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಸುದರ್ಶನ್ ಮಾತನಾಡಿ, ನಮ್ಮ ಇಲಾಖೆ ವತಿಯಿಂದ ಸುಗಮ ಸಂಗೀತ ಪರಿಷತ್ತಿಗೆ ಎಲ್ಲಾ ರೀತಿಯ ಸಹಾಯ ಮಾಡಲು ಸಿದ್ಧ ಎಂದು ಹೇಳಿದರು.
ಮಂಡ್ಯ ಸುಗಮ ಸಂಗೀತ ಪರಿಷತ್ ಅಧ್ಯಕ್ಷ ಡೇವಿಡ್ ಮಾತನಾಡಿದರು. ಸುಮಾರು ೧೫೦ಕ್ಕೂ ಹೆಚ್ಚು ಶಿಬಿರಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪರಿಷತ್ತಿನ ರಾಜ್ಯ ಕಾರ್ಯದರ್ಶಿ ಬಿ.ವಿ.ಪ್ರವೀಣ್, ಖಜಾಂಚಿ ಪ್ರಶಾಂತ್ ಉಡುಪ, ಗಾಯಕಿಯರಾದ ಇಂದ್ರಾಣಿ ಆನಂತರ, ರಶ್ಮಿ ಚಿಕ್ಕಮಗಳೂರು, ಹಿರಿಯ ಸಾಹಿತಿ ಜಯಪ ಹೊನ್ನಾಳಿ, ಪರಿಷತ್ತಿನ ಮೈಸೂರು ಜಿಲ್ಲಾ ಉಪಾಧ್ಯಕ್ಷ ನಾ.ಗಂಗಾಧರಪ್ಪ , ಕಾರ್ಯದರ್ಶಿ ಸಿರಿಬಾಲು, ಮಾಧ್ಯಮ ಸಲೆಗಾರರಾದ ಎನ್.ಬೆಟ್ಟೆಗೌಡ ಇತರರು ಹಾಜರಿದ್ದರು.