Mysore
24
overcast clouds

Social Media

ಶನಿವಾರ, 22 ಆಗಸ್ಟ್ 2026
Light
Dark

ಕಬ್ಬು ದರ ನಿಗದಿ ವಿಳಂಬ ಖಂಡಿಸಿ ಮೈಸೂರು- ಊಟಿ ರಸ್ತೆ ಬಂದ್

ಕಬ್ಬು ಬೆಳೆಗಾರರ ಸಂಘದಿಂದ ರಾಜ್ಯಾದ್ಯಂತ ನಾಲ್ಕು ಗಂಟೆ ಹೆದ್ದಾರಿ ತಡೆ ಚಳುವಳಿ

ಮೈಸೂರು: ಕಬ್ಬಿನ ದರ ನಿಗದಿ ವಿಳಂಬ ವಿರೋಧಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಗುರುವಾರ ಮೈಸೂರು ಸೇರಿದಂತೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಯಿತು.
ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಮೈಸೂರು ಎಪಿಎಂಸಿ ರಿಂಗ್‌ ರಸ್ತೆ ವೃತ್ತದಲ್ಲಿ ಹೆದ್ದಾರಿ ತಡೆ ನಡೆಸಿದ ಬೆಳೆಗಾರರು, ಉರುಳು ಸೇವೆ ಮಾಡಿ ಪ್ರತಿಭಟನೆ ದಾಖಲಿಸಿದರು.
ಪೊಲೀಸರು ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಅನುವು ಮಾಡಿ ಕೊಟ್ಟಿದ್ದರಿಂದ ಸಂಚಾರದಲ್ಲಿ ಹೆಚ್ಚೇನೂ ವ್ಯತ್ಯಯವಾಗಲಿಲ್ಲ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಕ್ಕರೆ ಸಚಿವರು ಕಾರ್ಖಾನೆ ಮಾಲೀಕರೊಂದಿಗೆ ನಾಲ್ಕು ಸಭೆಗಳನ್ನು ನಡೆಸಿದರೂ ಎಫ್ ಆರ್ ಪಿ ನಿಗದಿ ಪಡಿಸಲು ಸರಕಾರ ವಿಫಲವಾಗಿದೆ. ಸಕ್ಕರೆ ಕಾರ್ಖಾನೆ ಮಾಲೀಕರ ಲಾಬಿಗೆ ರಾಜ್ಯ ಸರಕಾರ ಮಣಿಯುತ್ತಿದೆ, ಸರಕಾರ ಪ್ರತಿ ಟನ್ ಕಬ್ಬಿಗೆ ಕನಿಷ್ಠ 3,500 ರೂ. ಬೆಲೆ ನಿಗದಿ ಮಾಡಬೇಕು ಎಂದು ಅಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹಿಸಿದರು.

ಕಳೆದ ನಾಲ್ಕು ತಿಂಗಳಿಂದ ರೈತರು ಧರಣಿ ನಡೆಸುತ್ತಿದ್ದರೂ ಈ ವರೆಗೂ ಸರಕಾರದ ಯಾವುದೇ ನಿರ್ಧಾರಗಳೂ ಕಾರ್ಯರೂಪಕ್ಕೆ ಬಂದಿಲ್ಲ. ಗೃಹ ಸಚಿವರು ಮತ್ತು ಸಂಸದರು ಅಡಿಕೆ ಬೆಳೆಗಾರರ ನಿಯೋಗವನ್ನು ದಿಲ್ಲಿಗೆ ಕೊಂಡೊಯ್ಯಬಹುದಾದರೆ, ಕಬ್ಬು ಬೆಳೆಗಾರರನ್ನೇಕೆ ನಿರ್ಲಕ್ಷಿಸುತ್ತಿದ್ದಾರೆ? ಎಂದು ಪ್ರಶ್ನಿಸಿದ ಅವರು 30 ಲಕ್ಷ ಕಬ್ಬು ಬೆಳೆಗಾರರ ಬೆಂಬಲಕ್ಕೆ ಶಾಸಕರು, ಸಂಸದರು, ಸಚಿವರು ನಿಲ್ಲುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೆರಡು ದಿನಗಳೊಳಗೆ ದರ ಪ್ರಕಟಿಸದಿದ್ದರೆ ಅಕ್ಟೋಬರ್ 31 ರಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಂಘ ಪ್ರತಿಭಟನೆ ನಡೆಸಲಿದೆ ಎಂದವರು ಎಚ್ಚರಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!