ಮೈಸೂರು : ವನ್ಯಜೀವಿ ಕಳ್ಳಸಾಗಣೆ ವಿರುದ್ಧ ಕಾರ್ಯಾಚರಣೆ ನಡೆಸಿರುವ ಮಹಾರಾಷ್ಟ್ರ ರಾಜ್ಯದ ನಾಗ್ಪುರ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು(ಡಿಆರ್ಐ) ಮೈಸೂರಿನಲ್ಲಿ ಶಂಕಿತ ದಂತ ಕಳ್ಳಸಾಗಣೆ ಜಾಲದ ಮೇಲೆ ದಾಳಿ ನಡೆಸಿ, 2 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಮೂರು ಆನೆ ದಂತಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ.
ಕಾರ್ಯಾಚರಣೆಯಲ್ಲಿ ವಿವಿಧ ಗಾತ್ರದ ಮೂರು ದೊಡ್ಡ ದಂತಗಳನ್ನು ವಶಕ್ಕೆ ಪಡೆಯಲಾಗಿದೆ. ಅವುಗಳ ನಿಖರವಾದ ತೂಕವನ್ನು ಇನ್ನೂ ಅಧಿಕೃತವಾಗಿ ಬಹಿರಂಗಪಡಿಸಲಾಗಿಲ್ಲವಾದರೂ ಮೂಲಗಳು ಹೇಳುವಂತೆ ದಂತಗಳು ತಲಾ 5 ರಿಂದ 30 ಕೆಜಿ ತೂಕವಿವೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮಕೃಷ್ಣನಗರ ‘ಐ’ ಬ್ಲಾಕ್ ನಿವಾಸಿಗಳಾದ ಹಾಗೂ ಆಂಧ್ರಪ್ರದೇಶ ಸರ್ಕಾರದ ನಿವೃತ್ತ ಅರಣ್ಯಾಧಿಕಾರಿ ಜಮುನಾ ರಾಣಿ ಕಾಕಬುಲ್, ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಸೈಯದ್ ಫಯಾಜ್, ಕೊಳ್ಳೇಗಾಲದ ಮುನೀರ್ ಪಾಷಾ, ಮತ್ತು ಕೊಳ್ಳೇಗಾಲದ ಅಜ್ಗರ್ ಖಾನ್ ಎಂಬವರನ್ನು ಬಂಧಿಸಲಾಗಿದೆ. ದಾಳಿಯ ಸಮಯದಲ್ಲಿ ಜಮುನಾ ರಾಣಿ ಕಾಕಬುಲ್ ಮತ್ತು ಅವರ ಪತಿ ವೆಂಕಟೇಶ್ ಕಾಕಬುಲ್ ಇಬ್ಬರೂ ಮನೆಯಲ್ಲಿದ್ದರು.
ಪ್ರಾಥಮಿಕ ತನಿಖೆಯಲ್ಲಿ ಜಮುನಾ ರಾಣಿ ಕಾಕಬುಲ್ ಅಕ್ರಮವಾಗಿ ದಂತ ವ್ಯಾಪಾರಿಗಳೊಂದಿಗೆ ಸಂಪರ್ಕ ಹೊಂದಿದ್ದರು ಎಂದು ತಿಳಿದುಬಂದಿದೆ. ಆಕೆಯ ಪತಿ ವೆಂಕಟೇಶ್ ಕಾಕಬುಲ್ ಈ ದಂಧೆಯಲ್ಲಿ ಯಾವುದೇ ಪಾತ್ರ ವಹಿಸಿಲ್ಲ ಮತ್ತು ಅವರ ಪತ್ನಿಯ ಅಕ್ರಮ ಚಟುವಟಿಕೆಗಳ ಬಗ್ಗೆ ಅವರಿಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.





