ಮೈಸೂರು: ಮುಂಗಾರು ಮಳೆ ಆರ್ಭಟದಿಂದ ಈಗಾಗಲೇ ಹಳೇ ಮೈಸೂರು ಭಾಗದ ಜಲಾಶಯಗಳು ಸಂಪೂರ್ಣ ಭರ್ತಿಯಾಗಿದ್ದು, ರೈತರ ಮೊಗದಲ್ಲಿ ಸಂತಸ ಮನೆಮಾಡಿದೆ.
ಹೀಗಿರುವಾಗಲೇ ಹಿಂಗಾರು ಮಳೆಯೂ ಕೂಡ ರಾಜ್ಯದಲ್ಲಿ ಚುರುಕು ಪಡೆದುಕೊಂಡಿದ್ದು, ಮತ್ತೆ ಜಲಾಶಯಗಳು ಭರ್ತಿಯಾಗಿವೆ.
ಕೆಆರ್ಎಸ್ ಜಲಾಶಯದ ಇಂದಿನ ನೀರಿನ ಮಟ್ಟ: ಹಳೆ ಮೈಸೂರು ಭಾಗದ ಜೀವನಾಡಿಯಾಗಿರುವ ಕೆಆರ್ಎಸ್ ಜಲಾಶಯ ಕಳೆದ ನಾಲ್ಕೈದು ತಿಂಗಳುಗಳಿಂದ ತುಂಬಿ ತುಳುಕುತ್ತಿದೆ. 124.80 ಅಡಿಗಳಸ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಇಂದು 124.80 ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ 6392 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದು, ಜಲಾಶಯದಿಂದ 6135 ಕ್ಯೂಸೆಕ್ಸ್ ನೀರನ್ನು ಹೊರಗೆ ಬಿಡಲಾಗುತ್ತಿದೆ.
ಇದನ್ನು ಓದಿ: ಕಾವೇರಿ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆ: ಕೆಆರ್ಎಸ್ ಹೊರಹರಿವು ಭಾರೀ ಹೆಚ್ಚಳ
ಕಬಿನಿ ಜಲಾಶಯದ ನೀರಿನ ಮಟ್ಟ: ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲ್ಲೂಕಿನ ಬೀಚನಹಳ್ಳಿ ಗ್ರಾಮದಲ್ಲಿರುವ ಕಬಿನಿ ಜಲಾಶಯವು ಇಲ್ಲಿಯವರೆಗೂ ಭರ್ತಿಯಾಗಿಯೇ ಉಳಿದಿದೆ. ಆದರೆ ಜಲಾಶಯಕ್ಕೆ ನೀರಿನ ಒಳಹರಿವು ಕೊಂಚ ಕಡಿಮೆಯಾಗಿದೆ. 84 ಅಡಿಗಳ ಸಾಮರ್ಥ್ಯದ ಜಲಾಶಯದಲ್ಲಿ ಇಂದು 83.82 ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಜಲಾಶಯದಿಂದ 1 ಸಾವಿರ ಕ್ಯೂಸೆಕ್ಸ್ ನೀರನ್ನು ಹೊರಗೆ ಬಿಡಲಾಗುತ್ತಿದ್ದು, ಸದ್ಯ ಜಲಾಶಯಕ್ಕೆ 1278 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ.
ಇನ್ನು ಮೊಂತಾ ಚಂಡಮಾರುತದ ಪರಿಣಾಮ ಹವಾಮಾನ ಇಲಾಖೆ ರಾಜ್ಯದಲ್ಲೂ ಭಾರೀ ಮಳೆಯಾಗುವ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಮಳೆ ಹೆಚ್ಚಾದರೆ ಜಲಾಶಯಗಳ ಒಳಹರಿವಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ.
ಈ ಹಿನ್ನೆಲೆಯಲ್ಲಿ ಈಗಾಗಲೇ ಭರ್ತಿಯಾಗಿರುವ ಜಲಾಶಯಗಳಿಂದ ಒಳಹರಿವನ್ನು ನೋಡಿಕೊಂಡು ಹೊರಹರಿವನ್ನು ಹೆಚ್ಚಳ ಮಾಡಲಾಗುತ್ತದೆ.





