ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಜಿಂಕೆ ಬೇಟೆಯಾಡಿದ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಹುಣಸೂರು ವನ್ಯಜೀವಿ ವಲಯ, ಆನೆ ಚೌಕೂರು ಭಾಗ-2 ಶಾಖೆಯ ಉಪವಲಯ ವ್ಯಾಪ್ತಿಯ ಅಯ್ಯನಕೆರೆ ಹಾಡಿ ಸಮೀಪದಲ್ಲಿ ಹಾಡಿಯ ನಾಗ ಬಿನ್ ಹೊನ್ನ, ಬಿಳಿಯ ಬಿನ್ ತಮ್ಮಣ್ಣಿ ಇವರು ಕಾಡಿನಲ್ಲಿ ಜಿಂಕೆಯೊಂದನ್ನು ಬೇಟೆಯಾಡಿ ಜಿಂಕೆ ಚರ್ಮವನ್ನು ಸುಲಿದು ಮಾಂಸವನ್ನಾಗಿ ಪರಿವರ್ತಿಸುತ್ತಿದ್ದರು. ಖಚಿತ ಮಾಹಿತಿಯ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ದಸ್ತಗಿರಿ ಮಾಡಿ ನಾಗ ಬಿನ್ ಹೊನ್ನನನ್ನು ಬಂಧಿಸಿದ್ದಾರೆ. ಮತ್ತಿಬ್ಬರು ಆರೋಪಿಗಳಾದ ಬಿಳಿಯ ಬಿನ್ ತಮ್ಮಣ್ಣಿ ಹಾಗೂ ರಾಜು ಕಾಡಿನಲ್ಲಿ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದಾರೆ. ಬಂಧಿತ ಆರೋಪಿಯಿಂದ ಜಿಂಕೆಯ ಮೃತ ದೇಹ, ಜಿಂಕೆಯ ತಲೆ, ಜಿಂಕೆಯ ಚರ್ಮ ಸೇರಿದಂತೆ ಕತ್ತಿಗಳು, ಮಾಂಸವನ್ನು ಕಡಿಯಲು ಬಳಸುತ್ತಿದ್ದ 2 ಮರದ ಕೊಂಟು ಹಾಗೂ ಬಿಳಿಯ ಬಣ್ಣದ ಚೀಲಗಳನ್ನು ವಶಪಡಿಸಿಕೊಳ್ಳಲಾಗಿದೆ.