ಶನಿವಾರಸಂತೆ: ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ನೀರುಗುಂದ ಗ್ರಾಮದ ಹೇಮಾವತಿ ನದಿ ಹಿನ್ನೀರಿನಲ್ಲಿ ಮೀನು ಹಿಡಿಯಲು ತೆರಳಿ ಕಣ್ಮರೆಯಾಗಿದ್ದ ಸ್ಥಳೀಯ ಗ್ರಾಮದ ಇಬ್ಬರ ಮೃತದೇಹ ಪತ್ತೆಯಾಗಿದೆ.
ನೀರುಗುಂದ ಗ್ರಾಮದ ನಿವಾಸಿಗಳಾದ ಚನ್ನವೀರಯ್ಯ ಅವರ ಪುತ್ರ ಶಿವರಾಜ್(೫೧) ಮತ್ತು ಬಸವರಾಜು ಅವರ ಪುತ್ರ ನಾಗರಾಜು(೪೫) ಮೃತಪಟ್ಟವರು. ಇಬ್ಬರು ಗುರುವಾರ ರಾತ್ರಿ ವೇಳೆಯಲ್ಲಿ ಮೀನು ಹಿಡಿಯಲು ತೆರಳಿ ನಾಪತ್ತೆಯಾಗಿದ್ದರು. ಮರುದಿನ ಬೆಳಗಾದರೂ ಇಬ್ಬರು ಮನೆಗೆ ಬಾರದ ಹಿನ್ನಲೆ ಅನುಮಾನಗೊಂಡ ಇಬ್ಬರ ಮನೆಯ ಪೋಷಕರು ಶುಕ್ರವಾರ ಬೆಳಗ್ಗೆ ಹೇಮಾವತಿ ನದಿ ಹತ್ತಿರ ಹೋಗಿ ಗಮನಿಸಿದಾಗ ಮೀನು ಹಿಡಿಯಲು ಬಳಸಿದ ಬಲೆ ಮತ್ತು ಶಿವರಾಜ್ ಅವರ ಚಪ್ಪಲಿಯೊಂದು ದಡದಲ್ಲಿ ಪತ್ತೆಯಾಗಿತ್ತು.
ಇಬ್ಬರು ನಾಪತ್ತೆಯಾಗಿರುವ ಕುರಿತು ಶನಿವಾರಸಂತೆ ಪೊಲೀಸರಿಗೆ ಮಾಹಿತಿ ನೀಡಿದ ಮೇರೆಗೆ ಶುಕ್ರವಾರ ಮಧ್ಯಾಹ್ನದಿಂದ ಪೋಲಿಸರು, ಅಗ್ನಿಶಾಮಕ ದಳದ ಸಿಬ್ಬಂದಿ ನದಿಯಲ್ಲಿ ಶೋಧ ಕಾರ್ಯನಡೆಸುತ್ತಿದ್ದರು. ಭಾನುವಾರ ಇಬ್ಬರ ಮೃತದೇಹ ಪತ್ತೆಯಾಗಿದೆ.
ಭಾನುವಾರ ಬೆಳಗ್ಗೆ ಎನ್ಆರ್ಎಫ್ ಪಡೆ, ಅಗ್ನಿಶಾಮಕ ದಳ ಹೇಮಾವತಿ ಹಿನ್ನೀರಿನಲ್ಲಿ ಶೋಧ ಕಾರ್ಯಚರಣೆ ಮುಂದುವರೆಸಿದ್ದರು. ಬೆಳಗ್ಗೆ ೯ ಗಂಟೆಗೆ ಇಬ್ಬರು ನಾಪತ್ತೆಯಾಗಿದ್ದ ಸ್ಥಳದಿಂದ ೧ ಕಿ.ಮೀ. ದೂರದಲ್ಲಿರುವ ಜನಾರ್ಧನಹಳ್ಳಿ ಗ್ರಾಮದ ಹಿನ್ನೀರಿನ ದಡದಲ್ಲಿ ನಾಗರಾಜ್ ಅವರ ಶವ ಪತ್ತೆಯಾಗಿದೆ. ಮತ್ತೆ ಮುಂದುವರೆದ ಕಾರ್ಯಾಚರಣೆಯಲ್ಲಿ ನಾಗರಾಜ್ ಶವ ದೊರೆತ ಸ್ವಲ್ಪ ದೂರದಲ್ಲಿ ಶಿವರಾಜ್ ಅವರ ಶವ ಪತ್ತೆಯಾಗಿದೆ.
ಘಟನೆಗೆ ಸಬಂಧಿಸಿದಂತೆ ಸ್ಥಳಕ್ಕೆ ಮಡಿಕೇರಿ ಶಾಸಕ ಡಾ.ಮಂಥರ್ ಗೌಡ ಭೇಟಿ ನೀಡಿ ಇಬ್ಬರ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು. ಶಾಸಕ ಡಾ.ಮಂಥರ್ ಗೌಡ ಅವರ ಸೂಚನೆ ಮೇರೆಗೆ ವೈದ್ಯರು ಶಿವರಾಜ್ ಮತ್ತು ನಾಗರಾಜ್ ಅವರುಗಳ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ನೀರುಗುಂದ ಗ್ರಾಮದ ಸ್ಮಶಾನದಲ್ಲಿ ನಡೆಸಿದರು. ನಂತರ ಇಬ್ಬರ ಅಂತ್ಯಕ್ರಿಯೆಯನ್ನು ಅಲ್ಲಿಯೇ ನೇರವೇರಿಸಲಾಯಿತು.
ಸ್ಥಳಕ್ಕೆ ಶನಿವಾರಸಂತೆ ಪೋಲಿಸ್ ಠಾಣಾಧಿಕಾರಿ ಚಂದ್ರು ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಈ ಸಂಬಂಧ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.




