ಮೈಸೂರು : ಆರ್ಟಿಫಿಸಿಯಲ್ ಇಂಟಲಿಜೆನ್ಸ್ (ಎಐ) ಯುಗದಲ್ಲಿ ಸೈಬರ್ ವಂಚನೆ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಇದರಿಂದ ಮೈಸೂರು ನಗರ ಹೊರತಾಗಿಲ್ಲ. ಹೊಸ ಮಾರ್ಗಗಳ ಮೂಲಕ ಸಾರ್ವಜನಿಕರನ್ನು ಆನ್ಲೈನ್ ಮೂಲಕ ವಂಚನೆ ಮಾಡುಲ ಜಾಲದ ವಿರುದ್ಧ ಪೊಲೀಸರು ಸಾರ್ವಜನಿಕರಲ್ಲಿ ಎಷ್ಟೇ ಅರಿವು ಮೂಡಿಸುತ್ತಿದ್ದರು. ಸಾರ್ವಜನಿಕರು ಮಾತ್ರ ಮೋಸ ಹೋಗುವುದು ತಪ್ಪಿಲ್ಲ.
ಇದೀಗ ಎರಡು ಪ್ರತ್ಯೇಕ ಪ್ರಕರಣದಲ್ಲಿ ಹೆಚ್ಚಿನ ಹಣದ ಆಸೆಗೆ ಬಿದ್ದ ಇಬ್ಬರು ನಕಲಿ ಕಂಪೆನಿಗಳ ಮೂಲಕ ಷೇರು ಮಾರುಕಟ್ಟೆಗೆ ಹಣ ಹೂಡಿಕೆ ಮಾಡಿ 1.52 ಕೋಟಿ ರೂ. ಕಳೆದುಕೊಂಡಿದ್ದಾರೆ.
ಮೊದಲ ಪ್ರಕರಣದಲ್ಲಿ ನಗರದ ಗಾಯಿತ್ರಿಪುರಂ ನಿವಾಸಿ ಹಾಗೂ ಇಂಜಿನಿಯರ್ ಒಬ್ಬರು ತಮ್ಮ ಮೊಬೈಲ್ ಮೂಲಕ ಇನ್ಸ್ಟಾಗ್ರಾಂನಲ್ಲಿ ಜಾಹೀರಾತೊಂದನ್ನು ಗಮನಿಸಿದ್ದಾರೆ. ನಂತರ ಅಲ್ಲಿನ ಆಪ್ಸ್ ಟ್ಯಾಕ್ಸ್ ವ್ಯಾಲ್ಯೂ ಗ್ರೂಪ್ಗೆ ಸೇರಿದ್ದಾರೆ.
ಅವರು ಹೇಳಿದಂತೆ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಆರಂಭಿಸಿದ್ದಾರೆ. ಮೊದಲಿಗೆ ಅವರ ಖಾತೆಯಲ್ಲಿ ಲಾಭಾಂಶ ತೋರಿಸಲಾಗಿದೆ. ಇದರಿಂದ ಉತ್ತೇಜಿತರಾದ ಅವರು ಹಂತಹಂತವಾಗಿ 1,26,85,970 ರೂ. ಅನ್ನು ಅಪರಿಚಿತರ ಖಾತೆಗೆ ಜಮೆ ಮಾಡಿ ವಂಚನೆಗೆ ಒಳಗಾಗಿದ್ದಾರೆ.
ಎರಡನೇ ಪ್ರಕರಣದಲ್ಲಿ ಟೆಲಿಗ್ರಾಂ ಮೂಲಕ ಜಾಹೀರಾತನ್ನು ಗಮನಿಸಿದ ಕನಕದಾಸ ನಗರ ನಿವಾಸಿ ಯುವಕನೋರ್ವ ಪಾರ್ಟ್ ಟೈಂ ಕೆಲಸಕ್ಕೆ ಸೇರಿದ್ದಾನೆ. ಮೊದಲಿಗೆ ಆತ ಟಾಸ್ಕ್ ಪೂರೈಸಿದ ಹಿನ್ನೆಲೆಯಲ್ಲಿ ನಕಲಿ ಕಂಪೆನಿಯ ಪ್ರತಿನಿಧಿಗಳು ಸ್ವಲ್ಪ ಹಣ ನೀಡಿದ್ದಾರೆ. ನಂತರ ಆತನನ್ನು ಷೇರು ಮಾರುಕಟ್ಟೆಗೆ ಹೂಡುವಂತೆ ಪ್ರೇರೇಪಿಸಿದ್ದಾರೆ. ಅವರ ಮಾತನ್ನು ನಂಬಿದ ಆತ ಹೆಚ್ಚು ಲಾಭದ ಆಸೆಗೆ ಬಿದ್ದು ಹಂತಹಂತವಾಗಿ 15,01,634 ರೂ. ಹಾಕಿ ವಂಚನೆಗೆ ಒಳಗಾಗಿದ್ದಾನೆ. ಈ ಸಂಬಂದ ಸೈಬರ್ ಅಪರಾಧ ಠಾಣೆಯಲ್ಲಿ ದೂರು ದಾಖಲಾಗಿದೆ.
ನಾವು ಮುಂಬೈ ಪೊಲೀಸರು: ಹೀಗೆ ಹೇಳುವ ಮೂಲಕ ನಿವೃತ್ತ ಅಧಿಕಾರಿಯನ್ನು ಬೆದರಿಸಿದ ದುಷ್ಕರ್ಮಿಗಳು ಅವರಿಂದ ವಿವಿಧ ಖಾತೆಗಳ ಮೂಲಕ 11.80 ಲಕ್ಷ ರೂ. ಖಾತೆಗೆ ಹಾಕಿಸಿಕೊಂಡು ವಂಚಿಸಿದ್ದಾರೆ.
ನಾವು ಮುಂಬೈ ಪೊಲೀಸ್ ಠಾಣೆಯಿಂದ ಮಾತನಾಡುತ್ತಿದ್ದೇವೆ. ನೀವು ಕೆಲ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದೀರಿ. ಹೀಗಾಗಿ ನಿಮ್ಮ ಖಾತೆಗಳನ್ನು ಸೀಜ್ ಮಾಡಲಾಗುತ್ತದೆ. ನಿಮ್ಮ ಖಾತೆಯಲ್ಲಿರುವ ಹಣವನ್ನು ವರ್ಗಾವಣೆ ಮಾಡಿ ಎಂದು ಬೆದರಿಸಿ ವಂಚಿಸಿದ್ದಾರೆ.