ಮೈಸೂರು : ನಾಡಹಬ್ಬ ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಅರಮನೆ ಆವರಣದಲ್ಲಿ ಶುಕ್ರವಾರ ‘ಕುಶಾಲತೋಪು’ ಸಿಡಿಸುವ ಫಿರಂಗಿ ಗಾಡಿಗಳಿಗೆ ಪೂಜೆ ಸಲ್ಲಿಸಲಾಯಿತು.
ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ 11 ಫಿರಂಗಿಗಳಿಗೆ ಪೂಜೆ ಸಲ್ಲಿಸಿದರು. ಡಿಸಿಪಿಗಳಾದ ಆರ್.ಎನ್. ಬಿಂದು ಮಣಿ, ಕೆ.ಎಸ್.ಸುಂದರರಾಜ್, ಸಿಎಆರ್ ಡಿಸಿಪಿ ಸಿದ್ದನಗೌಡ ವೈ.ಪಾಟೀಲ್, ಮೌಂಟೆಂಡ್ ಕಮಾಂಡೆಂಟ್ ಎ.ಮಾರುತಿ, ಅರಮನೆ ಮಂಡಳಿ ಉಪ ನಿರ್ದೇಶಕ ಎಂ.ಸುಬ್ರಹ್ಮಣ್ಯ, ಎಸಿಪಿ ಚಂದ್ರಶೇಖರ್ ಪಾಲ್ಗೊಂಡಿದ್ದರು.
ಅರಮನೆ ಅರ್ಚಕ ಪ್ರಹ್ಲಾದರಾವ್ ನೇತೃತ್ವದಲ್ಲಿ ನಡೆದ ಧಾರ್ಮಿಕ ಕಾರ್ಯದಲ್ಲಿ ಮೊದಲಿಗೆ ಕುಶಾಲ ತೋಪು ಸಿಡಿಸುವಾಗ ಯಾವುದೇ ಅವಘಡವಾಗದಂತೆ ವಿಘ್ನನಿವಾರಕ ಗಣಪತಿಗೆ ಪೂಜೆ ಸಲ್ಲಿಸಲಾಯಿತು. ನಂತರ ಚಾಮುಂಡೇಶ್ವರಿ ದೇವತೆ ಸ್ಮರಿಸಲಾಯಿತು. ಮೃತ್ಯುಂಜಯ ಪೂಜೆ ಸಲ್ಲಿಸಿ 9 ಬಾರಿ ಮಂತ್ರಗಳನ್ನು ಆಯುಕ್ತರಿಂದ ಹೇಳಿಸಿ ಮಂಗಳಾರತಿ ಮಾಡಿಸಲಾಯಿತು. ಜಂಬೂಸವಾರಿ ದಿನದಂದು ಅಂಬಾರಿಯಲ್ಲಿರುವ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸುವಾಗ 21 ಕುಶಾಲ ತೋಪು ಸಿಡಿಸುವುದು ಸಂಪ್ರದಾಯ. ಅದಕ್ಕಾಗಿ ಪೂರ್ವಭಾವಿಯಾಗಿ ಆನೆಗಳು ಹಾಗೂ ಕುದುರೆಗಳು ಶಬ್ಧಕ್ಕೆ ಬೆಚ್ಚದಂತೆ ಮಾಡಲು ಪೂರ್ವಾಭ್ಯಾಸ ನೀಡಲಾಗುತ್ತದೆ.
ಕುಶಾಲತೋಪು ತಾಲೀಮು ಕೆಲವೇ ದಿನಗಳಿರುವುದರಿಂದ 11 ಫಿರಂಗಿಗಳನ್ನು ಗುರುವಾರ ಸ್ವಚ್ಛಗೊಳಿಸಿದ ಪೊಲೀಸ್ ಸಿಬ್ಬಂದಿ ಪೂಜೆಗೆ ಅಣಿಗೊಳಿಸಿದ್ದರು.
ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಮಾತನಾಡಿ, ‘ಜಂಬೂಸವಾರಿ ಮೆರವಣಿಗೆ ದಿನದಂದು ಅರಮನೆ ಹಾಗೂ ಪಂಜಿನ ಕವಾಯತು ಮೈದಾನದಲ್ಲಿ 21 ಸುತ್ತು ಕುಶಾಲತೋಪು ಸಿಡಿಸಲಾಗುತ್ತದೆ. ಸಿಬ್ಬಂದಿಯು ಅದಕ್ಕಾಗಿ ಅಭ್ಯಾಸ ನಡೆಸಲು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಲಾಗಿದೆ’ ಎಂದರು.
ಮುಂದಿನ ದಿನಗಳಲ್ಲಿ ಅಣಕು ಅಭ್ಯಾಸ (ಒಣತಾಲೀಮು) ನಡೆಯಲಿದೆ. ನಗರ ಸಶಸ್ತ್ರ ಮೀಸಲು ಪಡೆಯ ೩೫ಕ್ಕೂ ಹೆಚ್ಚು ಸಿಬ್ಬಂದಿ ಭಾಗವಹಿಸಲಿದ್ದಾರೆ’ ಎಂದರು. ಅರಮನೆಯಲ್ಲಿ ತಾಲೀಮು ನಡೆಸಲಾಗುತ್ತದೆ. ಗಜಪಡೆಯೊಂದಿಗೆ ತಾಲೀಮು ನಡೆಸುವ ಕುರಿತು ದಿನಾಂಕ ನಿಗದಿಪಡಿಸಿಲ್ಲ. ಸಮಾಲೋಚಿಸಿದ ಬಳಿಕ ನಿರ್ಧರಿಸಲಾಗುವುದು. ಕುಶಾಲತೋಪು ಸಿಡಿಸುವ ತಾಲೀಮನ್ನು ಯಾವ ಸ್ಥಳದಲ್ಲಿ ಮಾಡಬೇಕೆಂಬುದರ ಬಗ್ಗೆ ಚರ್ಚೆ ಮಾಡಿದ ಮೇಲೆ ಹೇಳಲಾಗುವುದು ಎಂದರು.
ಮೈಸೂರು ಅರಮನೆ ಆವರಣದಲ್ಲಿ ಶುಕ್ರವಾರಕುಶಾಲತೋಪುಸಿಡಿಸುವ ಫಿರಂಗಿ ಗಾಡಿಗಳಿಗೆ ಪೂಜೆ ಸಲ್ಲಿಸಲಾಯಿತು. ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್,ಡಿಸಿಪಿಗಳಾದ ಬಿಂದುಮಣಿ, ಕೆ.ಎಸ್.ಸುಂದರರಾಜ್, ಸಿಎಆರ್ ಡಿಸಿಪಿ ಸಿದ್ದನಗೌಡ ವೈ.ಪಾಟೀಲ್, ಮೌಂಟೆಂಡ್ ಕಮಾಂಡೆಂಟ್ ಎ.ಮಾರುತಿ,ಅರಮನೆ ಮಂಡಳಿ ಉಪ ನಿರ್ದೇಶಕ ಎಂ.ಸುಬ್ರಹ್ಮಣ್ಯ, ಎಸಿಪಿ ಚಂದ್ರಶೇಖರ್ ಹಾಜರಿದ್ದರು.





